ಸಮುದಾಯಗಳ ಮಧ್ಯೆ ಸೇತುವೆ ಕಟ್ಟುತ್ತಿದ್ದೇನೆ

| Published : Jun 12 2025, 03:47 AM IST

ಸಾರಾಂಶ

ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನು ಸೇರಿದಂತೆ ಎಲ್ಲರಲ್ಲೂ ಸಮಸ್ಯೆ ಇದೆ. ನನ್ನ ಪಾತ್ರಗಳು ಮುಸ್ಲಿಂ ಆಗಿದ್ದರಿಂದ, ಅದು ಆ ಸಮುದಾಯದ್ದಷ್ಟೇ ಸಮಸ್ಯೆ ಆಗುವುದಿಲ್ಲ. ಸಮಸ್ಯೆಯ ಪ್ರತಿನಿಧಿಯಷ್ಟೆ. ಸಮಸ್ಯೆ ಸಾರ್ವತ್ರಿಕ ಆಗಿದ್ದರಿಂದಲೇ ನನ್ನ ಕೃತಿಗೆ ಬೂಕರ್ ಪ್ರಶಸ್ತಿ ಬರಲು ಸಾಧ್ಯವಾಯಿತು ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು. ಮುಸ್ಲಿಂ ಸಮುದಾಯದವರನ್ನು ಅನ್ಯರಾಗಿ ಮಾಡುವ ಮೂಲಕ ಕೆಲವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಹೊರಗಿನಿಂದ ಬಂದವರಲ್ಲ, ನಾವು ಇಲ್ಲಿಯವರೇ. ಮುಸ್ಲಿಂ ಸಮುದಾಯದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

‘ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನು ಸೇರಿದಂತೆ ಎಲ್ಲರಲ್ಲೂ ಸಮಸ್ಯೆ ಇದೆ. ನನ್ನ ಪಾತ್ರಗಳು ಮುಸ್ಲಿಂ ಆಗಿದ್ದರಿಂದ, ಅದು ಆ ಸಮುದಾಯದ್ದಷ್ಟೇ ಸಮಸ್ಯೆ ಆಗುವುದಿಲ್ಲ. ಸಮಸ್ಯೆಯ ಪ್ರತಿನಿಧಿಯಷ್ಟೆ. ಸಮಸ್ಯೆ ಸಾರ್ವತ್ರಿಕ ಆಗಿದ್ದರಿಂದಲೇ ನನ್ನ ಕೃತಿಗೆ ಬೂಕರ್ ಪ್ರಶಸ್ತಿ ಬರಲು ಸಾಧ್ಯವಾಯಿತು ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು.ನಗರದ ಖುಬಾ ಕನ್ವೆನ್ಷನ್ ಹಾಲ್‌ನಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, "ನಾನು ಮುಸ್ಲಿಂ ಸಮುದಾಯದ ಹೆಸರು ಕೆಡಿಸುವ ಕೆಲಸ ಮಾಡುತ್ತಿಲ್ಲ. ನನ್ನ ಕತೆಗಳ ಮೂಲಕ ಮುಸ್ಲಿಂ ಹಾಗೂ ಹಿಂದೂ ಸಮುದಾಯಗಳ ಮಧ್ಯೆ ಸೇತುವೆ ಕಟ್ಟುತ್ತಿದ್ದೇನೆ. " ಮುಸ್ಲಿಂ ಸಮುದಾಯ ದ್ವೀಪ ಆಗಿ ಇರಲು ಸಾಧ್ಯವಿಲ್ಲ. ಸಾಮಾಜಿಕ ಸಂಬಂಧಗಳನ್ನು ಬೆಳೆಸಬೇಕು ಎಂದರು. ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ಸಹಾಯ ಮಾಡು. ಏನೂ ಸಾಧ್ಯವಾಗದಿದ್ದರೆ, ಕನಿಷ್ಠ ನಿನ್ನ ಮೌನವನ್ನು ಮುರಿದು ನ್ಯಾಯದ ಪರ ಮಾತನಾಡು ಎಂದು ಪೈಗಂಬರರು ಹೇಳುತ್ತಾರೆ ಅದೇ ಜಿಹಾದ್. ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ನಮ್ಮವ ಎಂದು ಬಸವಣ್ಣನವರು ಹೇಳಿದ್ದಾರೆ. ಕಷ್ಟ- ಸುಖಗಳನ್ನು ಹಂಚಿಕೊಂಡಾಗಲೇ ನಾನು ಇನ್ನೊಬ್ಬರನ್ನು ನಮ್ಮವ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದರು. ಮುಸ್ಲಿಂ ಸಮುದಾಯದವರು ತಮ್ಮ ಸಂಪ್ರದಾಯದ ಬಾಹ್ಯ ಆಚರಣೆ ಕಡಿಮೆ ಮಾಡಬೇಕು. ಇಲ್ಲವಾದರೆ, ಇದನ್ನೇ ದೊಡ್ಡ ಸಮಸ್ಯೆ ಮಾಡಲಾಗುತ್ತದೆ. ಮುಸ್ಲಿಂ ಸಮುದಾಯದವರನ್ನು ಅನ್ಯರಾಗಿ ಮಾಡುವ ಮೂಲಕ ಕೆಲವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಹೊರಗಿನಿಂದ ಬಂದವರಲ್ಲ, ನಾವು ಇಲ್ಲಿಯವರೇ. ಮುಸ್ಲಿಂ ಸಮುದಾಯದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಒಂದು ಸಂದರ್ಭದಲ್ಲಿ ‘ಮುಸ್ಲಿಂ ಮಹಿಳೆಯರಿಗೂ ಕೂಡ ಮಸೀದಿಯಲ್ಲಿ ಪ್ರವೇಶವಿಲ್ಲ ಇದಕ್ಕೆ ಪ್ರತಿಭಟಿಸುತ್ತೀರಾ’ ಎಂದು ಕೆಲವರು ನನ್ನನ್ನು ಕೇಳಿದ್ದರು. ಅದಕ್ಕೆ ನಾನು ಮಹಿಳೆಯರು ಮಸೀದಿಗೆ ಬರಬಾರದು ಎಂದೇನಿಲ್ಲ. ದಕ್ಷಿಣ ಏಷ್ಯಾ ಮುಸ್ಲಿಂ ಪುರುಷರು ಇದನ್ನು ಸಂಪ್ರದಾಯ ಮಾಡಿಕೊಂಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಆದರೆ, ಕೆಲವರು ಇದನ್ನು ರಾಜಕೀಯ ಮಾಡಿ, ಫತ್ವಾ ಹೊರಡಿಸಲು ಕಾರಣವಾಯಿತು. ಆ ಸಂದರ್ಭದಲ್ಲಿ ಅದನ್ನು ಸಹಿಸಲು ಕಷ್ಟವಾಯಿತು. ನಂತರ ಅವರಿಗೆ ನೈಜತೆಯ ಅರಿವಾಯಿತು. ನಂತರ ಸಮಾಜದ ಮುಖಂಡರು ಬಂದು ಇದನ್ನು ಸೌಹಾರ್ದವಾಗಿ ಬಗೆಹರಿಸಲಾಯಿತು. ನಂತರವೂ ಮುಸ್ಲಿಮರು ಬಾನು ಮುಷ್ತಾಕ್ ಅವರನ್ನು ಒಪ್ಪುವುದಿಲ್ಲ ಎಂದು ಹಲವರು ಹೇಳುತ್ತಿದ್ದರು ಎಂದರು. ನನ್ನ ಅಜ್ಜ ಖಾಜಿಯಾಗಿದ್ದರು. ಅವರು ಉರ್ದು ಶಿಕ್ಷಕರಾಗಿದ್ದರು. ನನ್ನ ಪತಿ ಮುಷ್ತಾಕ್ ಅವರ ತಂದೆ ಮುತುವಲ್ಲಿ ಆಗಿದ್ದವರು. ಎರಡೂ ಕುಟುಂಬದಲ್ಲಿ ಧಾರ್ಮಿಕ ಹಿನ್ನೆಲೆ ಇದ್ದರೂ, ಆ ಮನೆಯ ಮಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಎಗ್ಗಿಲ್ಲದೇ ಹೋಗುತ್ತಾಳೆ ಎಂದು ಸಮುದಾಯದ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಮಾಜಿಕವಾಗಿ ಕೆಲಸ ಮಾಡುತ್ತಿದ್ದುದನ್ನು ನನ್ನ ಸಮುದಾಯದ ಜನ ಬಹಳ ಆತಂಕದಿಂದ ನೋಡಿದರು. ಆಗ ವಿವರಣೆ ಕೊಟ್ಟಿದ್ದರೆ, ಅದು ಅವರಿಗೆ ತಿಳಿಯುತ್ತಿರಲಿಲ್ಲ ಎಂದು ಹೇಳಿದರು. ಇದೇ ವೇಳೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ ಗೌಡ, ಡಿವೈಎಸ್ಪಿ ಶಾಲು, ನಿವೃತ್ತ ಐಎಎಸ್ ಅಧಿಕಾರಿ ಅಶ್ರಫುಲ್ ಹಸನ್, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಎಸ್.ಎಸ್. ಪಾಷಾ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಸೈಯದ್ ತಾಜ್, ಖುಬಾ ಮಸೀದಿ ಅಧ್ಯಕ್ಷ ಬಶೀರ್ ಅಹಮದ್, ಮುಸ್ಲಿಂ ಸಂಘಟನೆಗಳ ಮುಖಂಡರಾದ ಹಸೈನಾರ್, ಇಲಿಯಾಸ್ ಬೇಗ್, ಅಮ್ಜದ್ ಖಾನ್, ಶಬ್ಬೀರ್ ಅಹ್ಮದ್, ಅವೇಜ್ ಪಾಷಾ ಇತರರು ಉಪಸ್ಥಿತರಿದ್ದರು.