ಯೋಗದಿಂದ ಸದೃಢ ಆರೋಗ್ಯ ನಿರ್ಮಾಣ: ವನದುರ್ಗ

| Published : Feb 02 2024, 01:02 AM IST

ಸಾರಾಂಶ

ಯೋಗ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಾಭ್ಯಾಸದ ನಿರಂತರತೆ ದೇಹಕ್ಕೆ ಶಕ್ತಿ ನೀಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಶರೀರದ ಸ್ವಾಸ್ಥ್ಯ, ಮನಸ್ಸು ನಿಯಂತ್ರಣಗೊಳಿಸುವಲ್ಲಿ ಯೋಗ ಸಾಧನೆ ಬಹುಮುಖ್ಯವಾಗಿದೆ

ಕನ್ನಡಪ್ರಭ ವಾರ್ತೆ ಶಹಾಪುರ

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಯೋಗ ಬಲ್ಲವನು ರೋಗದಿಂದ ಮುಕ್ತನಾಗಿ ಸದೃಢ ಆರೋಗ್ಯವಂತನಾಗಿರುತ್ತಾನೆ. ಕೆಲವು ಆಸನಗಳಿಂದ ಅಧಿಕ ತೂಕ ಕಳೆದುಕೊಂಡು ಆರೋಗ್ಯಕರ ದೇಹ ಸಂಪತ್ತನ್ನು ಯೋಗ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಚೆನ್ನಬಸ್ಸು ವನದುರ್ಗ ವಕೀಲರು ಹೇಳಿದರು.

ನಗರದ ಹಳಪೇಟೆ ಜ್ಞಾನಗಂಗೋತ್ರಿ ಶಾಲಾವರಣದಲ್ಲಿ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸೇಡಂ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಕಲ್ಯಾಣ ಕರ್ನಾಟಕ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಏಳು ದಿನಗಳವರೆಗೆ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯೋಗ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಾಭ್ಯಾಸದ ನಿರಂತರತೆ ದೇಹಕ್ಕೆ ಶಕ್ತಿ ನೀಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಶರೀರದ ಸ್ವಾಸ್ಥ್ಯ, ಮನಸ್ಸು ನಿಯಂತ್ರಣಗೊಳಿಸುವಲ್ಲಿ ಯೋಗ ಸಾಧನೆ ಬಹುಮುಖ್ಯವಾಗಿದೆ ಎಂದರು.

ಯೋಗ ಗುರುಗಳಾದ ನರಸಿಂಹ ವೈದ್ಯ ಮತ್ತು ಅವರ ತಂಡ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ನುರಿತಯೋಗಪಟುಗಳ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಮಾಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಹಿರಿಯರಾದ ಬಸವರಾಜ ಪಾಟೀಲ್ ಸೇಡಂ ಕಳಕಳಿಗೆ ಸಾಕ್ಷಿಯಾಗಿದೆ. ಯೋಗ ತರಬೇತಿ ಶಿಬಿರಕ್ಕೆ ತಾಲೂಕಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಿರಿಯ ವಕೀಲರಾದ ಆರ್. ಹೊನ್ನಾರೆಡ್ಡಿ ಮಾತನಾಡಿ, ಸುಮಾರು 4,000 ವರ್ಷ ಹಿಂದಿನ ಪದ್ಧತಿಯಾದ ಯೋಗದ ಜೊತೆ ಧ್ಯಾನ ಮಾಡುವುದರಿಂದಲೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆಂದರು.

ಯೋಗ ಸಾಧಕ ನರಸಿಂಹ ವೈದ್ಯ ಏಳು ದಿನದ ಶಿಬಿರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಏಳು ದಿನದ ಶಿಬಿರದಲ್ಲಿ ಕಲಿತ ಯೋಗ ಪ್ರದರ್ಶಿಸಿದರು. ಮಾರ್ಗದರ್ಶಕರಾಗಿ ಶಿಕ್ಷಕ ವೀರೇಶ ಉಳ್ಳಿ ಮತ್ತು ವಿನಾಯಕ ಇದ್ದರು. ಸಂಸ್ಥೆಯ ಅಧ್ಯಕ್ಷ ಮುರಳಿಧರ ಕುಲಕರ್ಣಿ, ಪ್ರಮುಖರಾದ ತಿಪ್ಪಣ್ಣ ಖ್ಯಾತನಾಳ, ರಾಮಚಂದ್ರಸಗರ, ಪ್ರಶಾಂತ ಇದ್ದರು. ನಾಗರಾಜ ಪತ್ತಾರ ಸ್ವಾಗತಿಸಿದರು. ನಾರಾಯಣ ಸಗರ ವಂದಿಸಿದರು. ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.