ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಸುಳ್ಳು ಹೇಳಿ ಜೈಲಿಗೆ ಸೇರಿದ್ದ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಸುಳ್ಳು ಹೇಳಿ ಜೈಲಿಗೆ ಸೇರಿದ್ದ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ.ಜಾಮೀನು ಸಿಕ್ಕಿದ್ದರೂ ಸಹ ಶ್ಯೂರಿಟಿ ಇಲ್ಲದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯ್ಯ ಮಂಕಾಗಿದ್ದು, ಸಹ ಕೈದಿಗಳೊಂದಿಗೆ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದ. ಈಗ ₹1 ಲಕ್ಷ ಬಾಂಡ್, ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್ಗೆ ಶ್ಯೂರಿಟಿ ನೀಡಲಾಗಿದೆ. ಇದರಿಂದ ಆರೋಪಿ ಬುರುಡೆ ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ. ಡಿ.18ರಂದು ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನ.24ರಂದು ₹1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಕೊರತೆಯಿಂದ ಬಿಡುಗಡೆಯಾಗದೇ ಚಿನ್ನಯ್ಯ ಜೈಲಿನಲ್ಲಿದ್ದ.ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.