ಹೊಳೆನರಸೀಪುರ: ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ಚಾಲಕ ಧರ್ಮ ಅವರಿಗೆ ರಸ್ತೆಯಲ್ಲಿ ದೊರೆತ ಸುಮಾರು 38 ಗ್ರಾಂ. ಚಿನ್ನದ ಮಾಂಗಲ್ಯ ಸರವನ್ನು ವಾರಸುದಾರರಿಗೆ ನೀಡುವ ಮೂಲಕ ಪ್ರಾಮಾಣಿಕತೆ ತೋರಿ, ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಟ್ಟಣದ ಕೆಎಸ್ಸಾರ್ಟಿಸಿ ಘಟಕದಲ್ಲಿ ಧರ್ಮ ಅವರು ಕರ್ತವ್ಯ ನಿರ್ವಹಿಸಿ ಮನೆಗೆ ಹಿಂದಿರುಗುವಾಗ ಸಂಜೆ ೬ ಗಂಟೆ ಸಮಯದಲ್ಲಿ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ನರ್ಸಿಂಗ್‌ ಕಾಲೇಜು ರಸ್ತೆಯಲ್ಲಿ ಸುಮಾರು ೩೮ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಬಿದ್ದಿರುವುದನ್ನು ಗಮನಿಸಿ, ತೆಗೆದುಕೊಂಡಿದ್ದಾರೆ. ನಂತರ ಬೆಳಗ್ಗೆ ೭ ಗಂಟೆಗೆ ಅದೇ ರಸ್ತೆಯಲ್ಲಿ ಬರುವಾಗ ಸರ ಕಳೆದುಕೊಂಡಿದ್ದ ಮಹಿಳೆಯ ಕುಟುಂಬ ಸದಸ್ಯರು ಹುಡುಕುತ್ತಿರುವುದನ್ನು ಕಂಡು ಸಂಪೂರ್ಣ ಮಾಹಿತಿ ಪಡೆದು, ಒಡವೆಯ ವಿವರ ಸರಿ ಕಂಡ ನಂತರ ಬಡಾವಣೆಯ ನಿವಾಸಿ ಹಾಗೂ ಕೆಎಂಎಫ್ ಘಟಕ ಒಂದರ ವ್ಯವಸ್ಥಾಪಕ ದಿನೇಶ್ ಅವರ ಸಮ್ಮುಖದಲ್ಲಿ ಮಹಿಳೆಗೆ ಸರ ನೀಡಿ ಪ್ರಾಮಾಣಿಕತೆ ಮೆರೆದು, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಚಾಲಕ ಪ್ರಶಸ್ತಿ ಪಡೆದಿರುವ ಧರ್ಮ ಅವರಿಗೆ ಚಿನ್ನದ ಒಡವೆ ಪಡೆದ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.