ಗೋಪಾಲಸ್ವಾಮಿ ಭಕ್ತರಿಗೆ ಬಸ್‌ ದರ ಏರಿಕೆ ಬಿಸಿ

| Published : Jan 13 2024, 01:31 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ನಾಡಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ನೆಪದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ ದರವನ್ನು ದಿಢೀರ್‌ ಏರಿಸಿ ಪ್ರಯಾಣಿಕರಿಗೆ ಬರೆ ಎಳೆದಿದೆ.

2023 ರ ತನಕ ಬಸ್‌ ದರ 60 ರು.ಇತ್ತು । ಹೊಸ ವರ್ಷದಿಂದ ಬಸ್‌ ದರ 70 ರು. । ಗೋಪಾಲಸ್ವಾಮಿ ಬೆಟ್ಟದ ದೂರ ೬ ಕಿ.ಮೀ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ನಾಡಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ನೆಪದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ ದರವನ್ನು ದಿಢೀರ್‌ ಏರಿಸಿ ಪ್ರಯಾಣಿಕರಿಗೆ ಬರೆ ಎಳೆದಿದೆ.

2023ರ ಡಿ.31ರ ತನಕ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ ತೆರಳಿ ವಾಪಸ್‌ ಬರಲು ಓರ್ವ ಪ್ರಯಾಣಿಕರಿಗೆ ೬೦ ರು. ಸಾರಿಗೆ ಬಸ್‌ ದರ ನಿಗದಿ ಪಡಿಸಿ ಪ್ರಯಾಣಿಕರು ಬೆಟ್ಟಕ್ಕೆ ಹೋಗಿ ಬರುತ್ತಿದ್ದರು. ೨೦೨೪ ರ ಹೊಸ ವರ್ಷದ ಸೋಮವಾರದಿಂದ ಹೊಸ ವರ್ಷದ ನೆಪದಲ್ಲಿ ಹೆಚ್ಚುವರಿ ಬಸ್‌ ಬಿಡುತ್ತಿರುವ ಕಾರಣ ಬೇರೆ ಡಿಪೋದಿಂದ ಬಸ್‌ ಕರೆಸಲಾಗಿದೆ ಎಂದು ಓರ್ವ ಪ್ರಯಾಣಿಕರಿಗೆ ಬೆಟ್ಟಕ್ಕೆ ಹೋಗಿ ಬರಲು ೬೦ ರು. ಬದಲು ೭೦ ರು.ಗಳನ್ನು ಪಡೆದಿದ್ದರು.

ಪ್ರಯಾಣಿಕರು ಹಾಗೂ ಪ್ರವಾಸಿಗರು ಹೊಸ ವರ್ಷದ ಕಾರಣ ಪ್ರಯಾಣಿಕರು ೧೦ ರು. ಹೆಚ್ಚಿಗೆ ಪಡೆದಿದ್ದಾರೆ ಎಂದು ಮರು ಮಾತನಾಡದೆ ೬೦ ರು.ಬದಲು ೭೦ ರು. ನೀಡಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಬಂದಿದ್ದರು.

ಹೊಸ ವರ್ಷದ ನೆಪದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೊಸ ವರ್ಷದ ನಂತರವೂ ಪ್ರಯಾಣಿಕರಿಂದ ೬೦ ರು.ಬದಲು ೭೦ ರು.ಪಡೆದು ಹೊಸ ವರ್ಷದ ನೆಪದಲ್ಲಿ ಕೆಎಸ್‌ಆರ್‌ಟಿಸಿ ಬರೆ ಎಳೆದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

೧೨ ಕಿ.ಮೀ ದೂರ:

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿ ಬರುವ ದೂರ ೧೨ ಕಿ.ಮೀ ಆಗಿದೆ. ಆದರೆ, ೭೦ ರು. ದುಬಾರಿ ದರ ವಸೂಲಿ ಮಾಡುವುದು ಹಗಲು ದರೋಡೆ ಎಂದು ಪ್ರಯಾಣಿಕ ಸುಭಾಷ್‌ ದೂರಿದರು. ಕನ್ನಡಪ್ರಭದೊಂದಿಗೆ ಮಾತನಾಡಿ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಬೆಟ್ಟದ ದೂರು ಕೇವಲ ೧೨ ಕಿಮಿ ೧೨ ಕಿಮಿ ದೂರಕ್ಕೆ ೭೦ ರು. ಪಡೆಯುವುದು ಸರಿಯಲ್ಲ ಕ್ಷೇತ್ರದ ಶಾಸಕರು ಪ್ರಯಾಣಿಕರ ದೃಷ್ಟಿಯಿಂದ ಹಿಂದಿನ ದರವನ್ನೇ ಮುಂದುವರಿಸಲಿ ಎಂದರು.

ಕನ್ನೇಗಾಲ ಗ್ರಾಪಂ ಸದಸ್ಯ ಜಿ.ಕೆ. ಲೋಕೇಶ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ೬೦ ರು. ಬದಲು ೭೦ರು. ದಿಢೀರ್‌ ದರ ಏರಿಸಿದ್ದು ಸರಿಯಲ್ಲ 4. ಕೆಎಸ್‌ಆರ್‌ ಟಿಸಿ ದರ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಹೊಸ ವರ್ಷದಿಂದ ಹಿಂದಿನ ದರಕ್ಕಿಂತ ೧೦ ರು. ಹೆಚ್ಚಿಸಲಾಗಿದೆ. ಹೊಸದಾಗಿ ೬ ಬಸ್‌ ಬಿಡಲಾಗಿದೆ ಹಾಗಾಗಿ ೧೦ ದರ ಹೆಚ್ಚಿಸಲಾಗಿದೆ. ಬೆಟ್ಟ ಕ್ರಮಿಸಲು ಹೆಚ್ಚು ಡಿಸೇಲ್‌ ಬೇಕಿರುವ ಕಾರಣ ದರ ಏರಿಕೆ ಮಾಡಲಾಗಿದೆ.

ಪುಷ್ಪ, ವ್ಯವಸ್ಥಾಪಕಿ ಗುಂಡ್ಲುಪೇಟೆ ಘಟಕ