ಶನಿವಾರಸಂತೆಯಲ್ಲಿ ಉದ್ಯಮಿ ರತನ್ ಟಾಟಾ ಶ್ರದ್ಧಾಂಜಲಿ ಸಭೆ

| Published : Oct 11 2024, 11:49 PM IST

ಸಾರಾಂಶ

ಶನಿವಾರ ಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರು ಉದ್ಯಮಿ ರತನ್ 'ಟಾಟಾ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದ್ದರು. ಪುಷ್ಪನಮನ ಸಲ್ಲಿಸಲಾಯಿತು.

ಕನ್ನಡಪ್ರಭಾ ವಾರ್ತೆ ಶನಿವಾರಸಂತೆ

ಪ್ರಪಂಚ ಕಂಡ ಅದ್ಭುತವಾದ ಪ್ರತಿಭೆ ಉದ್ಯಮ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲು ಪ್ರೇರಣೆಯಾದ ರತನ್ ಟಾಟಾ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇವರು ಕೋಟ್ಯಾಂತರ ಭಾರತೀಯರಿಗೆ ಅನ್ನದಾತರಾಗಿದ್ದರು ಎಂದು ಶನಿವಾರ ಸಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್ ಎನ್ ರಘು ಹೇಳಿದ್ದಾರೆ.

ಶನಿವಾರ ಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರು ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರತನ್ ಟಾಟಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ರತನ್ ಟಾಟಾ ಭಾರತ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರ ನೀತಿ ನಿಯಮಗಳನ್ನು ಅನುಸರಿಸಬೇಕಾಗಿದೆ. ಅವರು ಕೇವಲ ಉದ್ಯಮವನ್ನು ವ್ಯಾಪಾರ ದೃಷ್ಟಿಯಿಂದ ಮಾಡದೆ ದೇಶದ ಅಭಿವೃದ್ಧಿಗೂ ಸಹಕರಿಸಿದ್ದಾರೆ. ಎಷ್ಟೋ ಜನರಿಗೆ ತಮ್ಮ ಕುಟುಂಬ ನಿರ್ವಹಣೆಗೆ ಇವರು ಉದ್ಯೋಗ ನೀಡಿ ಅವಿಸ್ಮರಣೀಯರಾಗಿದ್ದಾರೆ ಎಂದರು.

ಭಾರತಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಚಂದ್ರಕಾಂತ್ ಮಾತನಾಡಿ, ಭಾರತೀಯ ಪ್ರತಿ ಪ್ರಜೆಯೂ ರತನ್ ಟಾಟಾ ಸಾಧನೆಯನ್ನು ಸ್ಮರಿಸಿ ಅವರ ಚರಿತ್ರೆಯಂತೆ ಮತ್ತಷ್ಟು ಉದ್ಯಮಿಗಳು ಹೊರ ಹುಮ್ಮಬೇಕಾಗಿದೆ. ಇದರಿಂದ ದೇಶ ಅಭಿವೃದ್ಧಿಯಾಗುವ ಜೊತೆಯಲ್ಲಿ ಭಾರತ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಎಂಬ ಹೆಗ್ಗಳಿಕೆ ತರಲು ಇಂತಹ ಉದ್ಯಮಿಗಳು ಪ್ರೇರೇಪಣಾ ಶಕ್ತಿಯಾಗಿದ್ದಾರೆ ಎಂದರು.

ಶನಿವಾರಸಂತೆ ಉದ್ಯಮಿಗಳಾದ ಯೋಗಾನಂದ, ಪ್ರಭಾಕರ್, ಮೂದ್ರವಳ್ಳಿ ದುರ್ಗೇಶ್, ಎಚ್‌.ಆರ್‌. ಹರೀಶ್ ಕುಮಾರ್, ಬಾಗೇರಿ ಗುಂಡ, ಸೋಮಶೇಖರ್ ಭಾಗವಹಿಸಿದ್ದರು.