ಮುಖ್ಯಮಂತ್ರಿ ಬದಲಾವಣೆ ಕೂಗಿನ ಬೆನ್ನಲ್ಲೆ ಸಚಿವ ಸತೀಶ್ ಜಾರಕಿಹೊಳಿ ಅಹಿಂದ ಶಾಸಕರ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ, ನಾನೊಬ್ಬ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಖ್ಯಮಂತ್ರಿ ಬದಲಾವಣೆ ಕೂಗಿನ ಬೆನ್ನಲ್ಲೆ ಸಚಿವ ಸತೀಶ್ ಜಾರಕಿಹೊಳಿ ಅಹಿಂದ ಶಾಸಕರ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ, ನಾನೊಬ್ಬ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ಎಂದಿದ್ದಾರೆ.

ಮಡಿಕೇರಿ ಯುವ ದಸರಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವೆಲ್ಲವೂ ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಸಿದ್ದರಾಮಯ್ಯ ಹಾಗೂ ಡಿಕೆಶಿ ಸಾಹೇಬರು, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಸರ್ ಎಲ್ಲರೂ ನನ್ನ ನಾಯಕರು.

ನಾನು ಅದರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ನನಗೆ ಅಷ್ಟು ಅರ್ಹತೆ ಕೂಡ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪಾರ್ಟಿ ಏನ್ ಹೇಳುತ್ತೆ ಅದನ್ನ ಪಾಲನೆ ಮಾಡುತ್ತಿದ್ದೇನೆ ಎಂದರು.

ಮುಡಾ ಹಗರಣವನ್ನು ಲೋಕಾಯುಕ್ತ ತನಿಖೆ‌ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಾಹೇಬರು ಯಾವುದೇ ತಪ್ಪು ಮಾಡಿಲ್ಲ. ಇದೆಲ್ಲವೂ ಬಿಜೆಪಿಯವರ ಷಡ್ಯಂತ್ರ.

ಸಿದ್ದರಾಮಯ್ಯ ಸಾಹೇಬರು ತಪ್ಪು ಮಾಡಿಲ್ಲ ಅನ್ನೋ ದಿನ ಬರುತ್ತದೆ ಎಂದರು.

ಕೊರೊನಾ ಸಂದರ್ಭದ 736 ಕೋಟಿ ರು. ಅಕ್ರಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇವತ್ತು ಕ್ಯಾಬಿನೆಟ್‌ನಲ್ಲಿ ಎಸ್‌ಐಟಿ ಹಾಗೂ ಸಬ್ ಕಮಿಟಿ ರಚನೆ‌ ಮಾಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ನಮ್ಮ ಸರ್ಕಾರ ನೀರು ಕುಡಿಸುವ ಪ್ರಯತ್ನ

ಮಾಡುತ್ತದೆ ಎಂದು ಹೇಳಿದರು.