ಸಾರಾಂಶ
ಎಸ್.ಜಿ. ತೆಗ್ಗಿನಮನಿ
ನರಗುಂದ: ಭಾನುವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ನರೇಗಾ ಯೋಜನೆಯ ಬದು ನಿರ್ಮಾಣ ಕಾಮಗಾರಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ.ಈಗ ಸುರಿಯುತ್ತಿರುವ ಮಳೆ ರೈತರಲ್ಲಿ ಹರ್ಷ ಮೂಡಿಸಿದ್ದು, ಬದುವಿನ ಕಂದಕಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.
ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿದ ಮಳೆಗೆ ಅಲ್ಲಲ್ಲಿ ನೈಸರ್ಗಿಕ ಹೊಂಡಗಳು, ತಗ್ಗು ಪ್ರದೇಶಗಲ್ಲಿ ನೀರು ಸಂಗ್ರಹವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನದಡಿ 13 ಗ್ರಾಪಂಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಮಾಡಲಾಗಿದೆ. ಕೂಲಿಕಾರರಿಗೆ ಕೆಲಸ ಕೊಡುವ ಜತೆಗೆ ರೈತರ ಜಮೀನಿಗೆ ಬದು ನಿರ್ಮಾಣ ಮಾಡಲಾಗಿದೆ. ಸದ್ಯ ಮಳೆನೀರಿಗೆ ಕಂದಕಗಳು ತುಂಬಿಕೊಂಡಿವೆ.ಸುರಕೋಡ ಮುಂದೆ: ತಾಲೂಕಿನ ಸುರಕೋಡ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ₹7 ಲಕ್ಷ ಮೊತ್ತದಲ್ಲಿ 1866 ಮಾನವ ದಿನಗಳ ಸೃಷ್ಟಿಸಿ, 350ಕ್ಕೂ ಅಧಿಕ ಕಂದಕಗಳನ್ನು ನಿರ್ಮಿಸಲಾಗಿದೆ. ಸುರಕೋಡ ಗ್ರಾಮದ ಕಿರು ಜಲಾನಯನ ಯೋಜನೆಯಡಿ ಈಗಾಗಲೇ 890 ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ.
ತಪ್ಪಿದ ಮಣ್ಣಿನ ಸವಕಳಿ: ಕಿರು ಜಲಾನಯನ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕೈಗೊಂಡರೆ ಅದರಲ್ಲಿ ಅಂದಾಜು 37 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 356 ಜನ ಅಕುಶಲ ಕೂಲಿಕಾರರು ಸೇರಿ ಕಳೆದ ಐದು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ಜಮೀನಿನ ಸುತ್ತ ಬದು ನಿರ್ಮಾಣವಾಗಿದೆ. ಸದ್ಯ ಸುರಿದ ಮಳೆಯಿಂದಾಗಿ ಜಮೀನಿನಲ್ಲಿ ಬಿದ್ದ ನೀರು ಭೂಮಿಯಲ್ಲಿ ಇಂಗಿದ ಆನಂತರ ಹರಿದು ಬಂದು ಕಂದಕಗಳಲ್ಲಿ ಸಂಗ್ರಹಗೊಂಡಿವೆ. ಇದರಿಂದ ರೈತರ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಬದುವಿನ ಹತ್ತಿರ ಕಂದಕಗಳನ್ನು ನಿರ್ಮಾಣ ಮಾಡಿದ್ದರಿಂದ ಬದು ಬೇಸಾಯ ಮಾಡಲು ಅನುಕೂಲವಾಗಿದೆ.ವಿವಿಧ ಗ್ರಾಮಗಳಲ್ಲಿ ಬದು ನಿರ್ಮಾಣ: ತಾಲೂಕಿನ ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಬೈರನಹಟ್ಟಿ, ಬನಹಟ್ಟಿ, ವಾಸನ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ, ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳ ಮಟ್ಟದ ವರೆಗೂ ಹಂತ ಹಂತವಾಗಿ ರೈತರ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣವಾಗಿವೆ.
ನಮ್ಮ ಜಮೀನಿನಲ್ಲಿ ಈ ಮೊದಲು ಬದು ಇರಲಿಲ್ಲ. ನರೇಗಾ ಯೋಜನೆಯಲ್ಲಿ ಗ್ರಾಪಂನಿಂದ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದ ನಮಗೆ ಅನುಕೂಲವಾಗಿದೆ. ಜಮೀನಿನ ಫಲವತ್ತತೆ ಹೆಚ್ಚಲಿದೆ ಎಂದು ಸುರಕೋಡ ಗ್ರಾಮದ ರೈತ ಬಸಪ್ಪ ಡಂಬಳ ಹೇಳಿದರು.ತಾಲೂಕಿನ ಸುರಕೋಡ, ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಬೈರನಹಟ್ಟಿ, ಬನಹಟ್ಟಿ, ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಬದು ಕಾಮಗಾರಿ ನಿರ್ಮಾಣ ಮಾಡಲು ಈಗಾಗಲೇ ಕಾಮಗಾರಿಗಳು ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ನಿನ್ನೆ ಮೊನ್ನೆ ಸುರಿದ ಮಳೆಗೆ ಕಂದಕಗಳಲ್ಲಿ ಮಳೆ ನೀರು ಸಂಗ್ರಹವಾಗಿವೆ. ಜಮೀನಿನ ಮಣ್ಣು ಮಳೆ ನೀರಿನ ರಭಸಕ್ಕೆ ಹರಿದು ಹೋಗಿಲ್ಲ ಎಂದು ನರಗುಂದ ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಕಿರು ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ ಭೌಗೋಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡುತ್ತಾ ಬರಲಾಗುವುದು. ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವ ಜತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಿದ್ದರಿಂದ ಮಣ್ಣು ಹಾನಿಯಾಗಿಲ್ಲ. ಕಂದಕಗಳಲ್ಲಿ ಮಳೆ ನೀರು ನಿಂತು ಅಂತರ್ಜಲಕ್ಕೆ ಸಹಾಯ ಆಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))