ಸಾರಾಂಶ
ಎರಡು ಕತ್ತೆಗಳಿಗೆ ಸಂಪ್ರದಾಯದಂತೆ ಮದುವೆ ಮಾಡಿಸಿ, ತಮಟೆಯೊಂದಿಗೆ ಮೆರವಣಿಗೆ ನಡೆಸಲಾಯಿತು
ಚಳ್ಳಕೆರೆ:
ತಾಲೂಕಿನ ತಳಕು ಹೋಬಳಿ ಕಾಲುವೇಹಳ್ಳಿ ಗೌಡರಹಟ್ಟಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಜನರು ಕತ್ತೆಗಳ ಮೆರವಣಿಗೆ ನಡೆಸುವ ಮೂಲಕ ವರುಣನ ಆಗಮನಕ್ಕೆ ಪ್ರಾರ್ಥಿಸಿದರು.ಗ್ರಾಮದ ಮುಖಂಡ ತಿಮ್ಮಣ್ಣ, ರಂಗಸ್ವಾಮಿ, ತಿಮ್ಮಯ್ಯ, ಗಾದ್ರಿಪಾಲಣ್ಣ, ಜಾಜೂರು ಹನುಮಂತಪ್ಪ, ಬೋರಣ್ಣ, ರಾಘವೇಂದ್ರ ಮುಂತಾದವರು ಮೆರವಣಿಗೆ ನೇತೃತ್ವ ವಹಿಸಿದ್ದರು. ಈ ವೇಳೆ ಎರಡು ಕತ್ತೆಗಳಿಗೆ ಸಂಪ್ರದಾಯದಂತೆ ಮದುವೆ ಮಾಡಿಸಿ, ತಮಟೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಗ್ರಾಮದ ಹಿರಿಯ ಮುಖಂಡ ಕಾಲುವೇಹಳ್ಳಿ ರಂಗಸ್ವಾಮಿ ಮಳೆ ಕೈಕೊಟ್ಟ ಸಂದರ್ಭದಲ್ಲಿ ನಮ್ಮ ಪೂರ್ವಜರು ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಿಸಿ ಮೆರವಣಿಗೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಉತ್ತಮ ಮಳೆಯಾದ ಉದಾಹರಣೆಗಳಿವೆ. ಈ ಹಿನ್ನೆಲೆ ಗ್ರಾಮದ ಹಿತಕ್ಕಾಗಿ ಗ್ರಾಮಸ್ಥರೆಲ್ಲರೂ ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಾದರೂ ಈ ಭಾಗದಲ್ಲಿ ಉತ್ತಮ ಮಳೆಯಾಗಿ ಸಂತೃಪ್ತಿ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.