ಬೈಂದೂರು ಅಗ್ನಿ ಶಾಮಕ ಠಾಣೆ ಶೀಘ್ರ ಉದ್ಘಾಟನೆ: ಗಂಟಿಹೊಳೆ ಭರವಸೆ

| Published : Jan 04 2025, 12:31 AM IST

ಸಾರಾಂಶ

ಬೈಂದೂರು ತಾಲೂಕು ಕಚೇರಿಯಲ್ಲಿ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಸಭೆ ನಡೆಸಿ ಶೀಘ್ರದಲ್ಲೇ ಬೈಂದೂರು ಅಗ್ನಿ ಶಾಮಕ ಠಾಣೆ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಂದೂರು

ಇಲ್ಲಿನ ತಾಲೂಕು ಕಚೇರಿಯಲ್ಲಿ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಸಭೆ ನಡೆಸಿ ಶೀಘ್ರದಲ್ಲೇ ಬೈಂದೂರು ಅಗ್ನಿ ಶಾಮಕ ಠಾಣೆ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ನಿರ್ಮಾಣ ಹಂತದಲ್ಲಿದ್ದ ಬೈಂದೂರು ಅಗ್ನಿ ಶಾಮಕ ಠಾಣೆಯ ಎಲ್ಲಾ ಕೆಲಸ ಕಾರ್ಯಗಳು ಮುಗಿದಿದ್ದು, ಅನುಷ್ಠಾನ ಇಲಾಖೆಯಾದ ಪೊಲೀಸ್ ಹೌಸಿಂಗ್ ಕಾರ್ಪೋರೇಶನ್‌ನಿಂದ ಅಗ್ನಿ ಶಾಮಕ ಇಲಾಖೆಗೆ ಕಟ್ಟಡ ಹಸ್ತಾಂತರ ಆಗಿದ್ದು, ಶೀಘ್ರವಾಗಿ ಹೊಸ ಕಟ್ಟಡದ ಲೋಕಾರ್ಪಣೆ ಆಗಲಿದೆ, ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಶಾಸಕರು ಸೂಚನೆ ನೀಡಿದರು.

ಅಲ್ಲದೆ, ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಗಂಗೊಳ್ಳಿ ಆಸುಪಾಸಿನಲ್ಲಿ ಹೊಸದಾಗಿ ಅಗ್ನಿ ಶಾಮಕ ಠಾಣೆ ಅಗತ್ಯತೆ ಇರುವುದರಿಂದ ಈ ಬಗ್ಗೆ ಇಲಾಖೆಯಿಂದ ಸೂಕ್ತ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು ಜಾಗ ನೀಡಿದ ನಂತರ ಆ ಭಾಗದಲ್ಲಿ ಅಗ್ನಿ ಶಾಮಕ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿಗಳು, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು, ಪೊಲೀಸ್ ಹೌಸಿಂಗ್ ಬೋರ್ಡ್ ಇದರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಬೈಂದೂರು ಅಗ್ನಿ ಶಾಮಕ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.