ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿಯೊಂದು 500 ಮೀ. ಆಳದ ಪ್ರಪಾತಕ್ಕೆ ಬಿದ್ದು 7 ಕನ್ನಡಿಗರು ಸೇರಿದಂತೆ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆ ಬಳಿ ಈ ಅಪಘಾತ
ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆಯ ಕಲಾವನ್ ಬಳಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಸಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.
ಕರ್ನಾಟಕದ 2 ಕುಟುಂಬದ 7 ಮಂದಿ ಬಲಿ
ದುರಂತದಲ್ಲಿ ಕರ್ನಾಟಕದ 2 ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಡಾಲ್ಹೌಸಿಗೆ ಶೇರಿಂಗ್ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು. ಮೃತರನ್ನು ಬೆಂಗಳೂರಿನ ನಿವಾಸಿಗಳಾದ ಅರವಿಂದ್ ಚಂದ್ರಾಕರ್, ಪತ್ನಿ ಪ್ರಾಚಿ, ಮಕ್ಕಳಾದ ದರ್ಶ್, ಅಕ್ಷದ್, ಕರ್ನಾಟಕದ ಕಾರ್ತಿಕೇಯನ್, ಪತ್ನಿ ಮಣಿಮಾಲಾ, ಅವರ ಪುತ್ರ ನಂದನ್ ಎಂದು ಗುರುತಿಸಲಾಗಿದೆ. ಇನ್ನು ಟ್ಯಾಕ್ಸಿ ಚಾಲಕನಾಗಿದ್ದ ಸ್ಥಳೀಯ ನಿವಾಸಿ ವಿಶ್ವಾಸ್ ಕೂಡ ಅಸುನೀಗಿದ್ದಾನೆ.
ಶುಕ್ರವಾರ ತಡರಾತ್ರಿಯೇ ಈ ಅಪಘಾತ ನಡೆದಿದೆ. ಶನಿವಾರ ಮಧ್ಯಾಹ್ನ ವಾಹನದ ಮಾಲೀಕರು, ಅದರ ಜಿಪಿಎಸ್ ಲೊಕೇಶನ್ ಗಮನಿಸಿದಾಗ 1 ದಿನದಿಂದ ಅದೇ ಲೊಕೇಶನ್ನಲ್ಲಿ ಟ್ಯಾಕ್ಸಿ ಇದ್ದದ್ದು ಕಂಡುಬಂದಿದೆ. ಆಗ ಸ್ಥಳ ಪರಿಶೀಲಿಸಿದಾಗ ಅಪಘಾತ ಆಗಿದ್ದು ಗೊತ್ತಾಗಿದೆ. ಆದರೆ ಭಾನುವಾರದವರೆಗೂ ಮೃತರ ಶವ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ಶವಗಳ ಶೋಧ ಕಾರ್ಯ ನಡೆಯುತ್ತಿದೆ. ಆದರೆ ಇದು ಅತ್ಯಂತ ದುರ್ಗಮ ಹಾದಿ ಹಾಗೂ ಹವಾಮಾನ ವೈಪರೀತ್ಯದಿಂದ ಶೋಧ ಕಾರ್ಯಕ್ಕೆ ತೊಡಕಾಗಿದೆ.
