ಸಾರಾಂಶ
ಗ್ರಾಮೀಣ ಪ್ರದೇಶದ 210 ಫಲಾನುಭವಿಗಳಿಗೆ ಉಪಕರಣಗಳ ಕಿಟ್ಗಳನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿತರಿಸಿದರು.
ಕನ್ನಡಪ್ರಭ ವಾರ್ತೆ ಬೈಂದೂರು
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 2024 - 25 ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದ 210 ಫಲಾನುಭವಿಗಳಿಗೆ ಉಪಕರಣಗಳ ಕಿಟ್ಗಳನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿತರಿಸಿದರು.ನಂತರ ಮಾತನಾಡಿದ ಶಾಸಕರು, ಬೈಂದೂರು ಕ್ಷೇತ್ರವು ಸಾಕಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿದ್ದರೂ, ಅನೇಕ ಮಂದಿ ಸ್ವಉದ್ಯೋಗ ಮೂಲಕ ತಮ್ಮ ಜೀವನಮಟ್ಟ ಸುಧಾರಿಸಿಕೊಂಡು ಗೌರವಯುತ ಜೀವನ ನಡೆಸುತ್ತಿದ್ದಾರೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಶೈಕ್ಷಣಿಕ ಭವಿಷ್ಯ ಸೇರಿದಂತೆ ಕುಟುಂಬದ ಸುಭದ್ರ ಬದುಕಿಗೆ ಶ್ರಮಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗವೂ ಕೂಡ ಏಳಿಗೆಯಾಗಿ ಇಡೀ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ. ಹಾಗಾಗಿ ಪಡೆದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಬೈಂದೂರು ಕ್ಷೇತ್ರ ವ್ಯಾಪ್ತಿಯ ಟೈಲರಿಂಗ್ ವೃತ್ತಿಯ 116 ಫಲಾನುಭವಿಗಳು, ಗಾರೆ ವೃತ್ತಿಯ 37 ಮಂದಿ, ಮರಗೆಲಸ ವೃತ್ತಿಯ 22 ಮಂದಿ, ಎಲೆಕ್ಟ್ರಿಷಿಯನ್ ವೃತ್ತಿಯ 16 ಮಂದಿ, ಬ್ಯೂಟಿಪಾರ್ಲರ್ ವೃತ್ತಿಯ 11 ಮಂದಿ, ಪ್ಲಂಬಿಂಗ್ ವೃತ್ತಿಯ 04 ಮಂದಿ, ಕ್ಷೌರಿಕ ವೃತ್ತಿಯ 02 ಮಂದಿ, ಕಮ್ಮಾರಿಕೆ ವೃತ್ತಿಯ 01 ಮಂದಿ, ದೋಬಿ ವೃತ್ತಿಯ 01 ಮಂದಿ ಸೇರಿದಂತೆ ಒಟ್ಟು 210 ಫಲಾನುಭವಿಗಳಿಗೆ ಶಾಸಕರು ಉಪಕರಣ ಕಿಟ್ ವಿತರಿಸಿದರು.