ಸಾರಾಂಶ
ಕವಿ ಗೋಪಾಲಕೃಷ್ಣ ಅಡಿಗರು ಬಾಲ್ಯದಲ್ಲಿ ಓದಿದ್ದ ಬೈಂದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ 32ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಹಿರಿಯ ಪತ್ರಕರ್ತ, ಶಾಸನ ಅಧ್ಯಯನ ಹವ್ಯಾಸಿ, ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಬೆಂಗಳೂರು ಇದರ ಸಂಚಾಲಕ ಮೊಗೇರಿ ಜಯರಾಮ ಅಡಿಗ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೈಂದೂರು
ಅಡಿಗರು ಬಾಲ್ಯದಲ್ಲಿ ಓದಿದ್ದ ಬೈಂದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ 32ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ಸೋಮವಾರ ನಡೆಯಿತು.ಹಿರಿಯ ಪತ್ರಕರ್ತ, ಶಾಸನ ಅಧ್ಯಯನ ಹವ್ಯಾಸಿ, ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಬೆಂಗಳೂರು ಇದರ ಸಂಚಾಲಕ ಮೊಗೇರಿ ಜಯರಾಮ ಅಡಿಗ ಉದ್ಘಾಟಿಸಿ, ಬಾಲಕ ಗೋಪಾಲಕೃಷ್ಣ ಅಡಿಗರು 9ರಿಂದ 14 ವರ್ಷದ ವರೆಗೆ ಈ ಶಾಲೆಯ ವಿದ್ಯಾರ್ಥಿ ಆಗಿದ್ದಾಗಲೇ ಬೈಂದೂರು ಮಕ್ಕಳ ಕೂಟ ಕಟ್ಟಿ ಅಧ್ಯಕ್ಷರಾಗಿ ‘ಕನ್ನಡ ಬಾಲ’ ಕೈ ಬರಹ ಮಾಸಪತ್ರಿಕೆ ನಡೆಸಿದರು. ಇದು ಅಡಿಗರು ಕವಿತೆ, ಕತೆ, ಲೇಖನ ರಚನೆಯ ಮೊದಲ ಹೆಜ್ಜೆ ಇಟ್ಟ ಮಾತೃ ಶಾಲೆ ಎಂದರು.
ಕರ್ನಾಟಕ ಮಟ್ಟದಲ್ಲಿ ಈವರೆಗೆ ಬೈಂದೂರು ಪ್ರದೇಶ ಮತ್ತು ಈ ತಾಲೂಕಿನ ಇತಿಹಾಸ, ಜಾನಪದ, ಸಂಸ್ಕೃತಿ ಅಲಕ್ಷಿತವಾಗಿದೆ. ಸಮೃದ್ಧ ಆಧುನಿಕ ಬೈಂದೂರನ್ನು ರೂಪಿಸುವ ಅಭಿಯಾನದಲ್ಲಿ ಶಾಸನಗಳ, ದೇವಾಲಯಗಳ, ಸಾಂಪ್ರದಾಯಿಕ ಮೌಲ್ಯಗಳ ಸಂರಕ್ಷಣೆ ಮತ್ತು ಅಧ್ಯಯನ ವ್ಯವಸ್ಥಿತವಾಗಿ ನಡೆಯಬೇಕೆಂದು ಅಡಿಗ ಸ್ಮಾರಕ ಟ್ರಸ್ಟ್ ಅಪೇಕ್ಷಿಸಿದೆ. ಇದರ ಒಂದು ಅಂಶವಾಗಿ ಈ ಭಾಗದ ಅನೇಕ ಹಿರಿಯರ ಆದರ್ಶ ಸಾಧನೆಗಳ ಆತ್ಮಕಥನಗಳು ಪ್ರಕಟವಾಗಬೇಕು ಎಂದರು.‘ಹಿರಿಯರ ಆತ್ಮಕಥನದ ಮೂಲಕ ಬೈಂದೂರು ಪ್ರಾದೇಶಿಕ ಇತಿಹಾಸ ನಿರೂಪಣೆ’ ವಿಷಯಕ್ಕೆ ನಿದರ್ಶನವಾಗಿ ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ತಮ್ಮ ಆತ್ಮಕಥನದ ಹಸ್ತ ಪ್ರತಿಯ ಕೆಲವು ಶೀರ್ಷಿಕೆಗಳನ್ನು ಉಲ್ಲೇಖಿಸಿ, ಕೆಲವು ಘಟನೆಗಳ, ಕವನಗಳ ಮಾಹಿತಿ ನೀಡಿ ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ ದೇವಾಡಿಗ, ಸುರಭಿ ಕಲಾ ಸಂಸ್ಥೆಯ ಅಧ್ಯಕ್ಷ ಆನಂದ ಮುದ್ದೋಡಿ, ಲೇಖಕ ಬಿ.ಚಂದ್ರಶೇಖರ ನಾವಡರು, ಕಸಾಪ ಬೈಂದೂರು ಘಟಕದ ಪದಾಧಿ ಕಾರಿ ಗೋವಿಂದ ಬಿಲ್ಲವ ಶಿರೂರು, ಧಾರ್ಮಿಕ ಮುಖಂಡ, ರಂಗ ನಿರ್ದೇಶಕ ಕಂಚಿಕಾನು ರವೀಂದ್ರ ಕಿಣಿ, ಯುವ ಕವಿ, ಕಥೆಗಾರ ಮಂಜುನಾಥ ಮರವಂತೆ, ಇನ್ನೂ ಅನೇಕ ಸಾಹಿತಿ, ಸಾಹಿತ್ಯಾಸಕ್ತರು ಮಾತುಕತೆಯಲ್ಲಿ ಪಾಲ್ಗೊಂಡರು. ಸುರಭಿ ಸಂಸ್ಥೆ ನಿರ್ದೇಶಕ ಸುಧಾಕರ ಪಿ. ಬೈಂದೂರು ಸ್ವಾಗತಿಸಿದರು. ರಾಘವೇಂದ್ರ ಕೆ. ವಂದಿಸಿದರು. ಕುಂದ ಅಧ್ಯಯನ ಕೇಂದ್ರ ಶಂಕರ ಕಲಾಮಂದಿರ ಉಪ್ಪುಂದ ಇದರ ಸಂಚಾಲಕ ಗಣಪತಿ ಹೋಬಳಿದಾರರು ಕಾರ್ಯಕ್ರಮ ಸಂಘಟಿಸಿ, ನಿರ್ವಹಿಸಿದರು.