ಕನ್ನಡಪ್ರಭ ವಾರ್ತೆ ಆನವಟ್ಟಿ
ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದರ ಜತೆಗೆ ಅವರ ಕುಟುಂಬದವರನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸುತ್ತಿರುವ ಡಾ. ಜ್ಞಾನೇಶ್ ಹಾಗೂ ಅವರ ಸ್ನೇಹ ಬಳಗದ ಕಾರ್ಯ ಶ್ಲಾಘನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಡಾ. ಜ್ಞಾನೇಶ್ ತಾಲೂಕು ಸ್ನೇಹ ಬಳಗದಿಂದ 80ನೇ ಸ್ವಾತಂತ್ರ್ಯೋತ್ಸವ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಗೌರವ ಸಮರ್ಪಣೆ ಹಾಗೂ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಗೆ ಕಲ್ಪಿಸಿರುವ ಏತ ನೀರಾವರಿ ಯೋಜನೆಗಳು ಈ ವರ್ಷದ ಬರ ಪರಿಸ್ಥಿತಿ ಎದುರಿಸಲು ಅನುಕೂಲವಾಗಿವೆ. ಸೊರಬ ತಾಲೂಕಿನ ಮೂಡಿ, ಮೂಗುರು ಹಾಗೂ ಕಚವಿ ಏತ ನೀರಾವರಿ ಯೋಜನೆಗಳಿಂದ ಕೆಲವು ಕೆರೆಗಳು ಶೇ.50 ಹಾಗೂ ಶೇ.25ರಷ್ಟು ಮಾತ್ರ ತುಂಬಿವೆ. ಮಳೆ ಕೊರತೆ ಇರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೆರೆಗಳನ್ನು ಹೇಗೆ ತುಂಬಿಸಬೇಕು ಎಂಬುದರ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.ನೀಟ್ ಪರೀಕ್ಷೆಯಿಂದ ಆಟೋ ಚಾಲಕರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೂ ವೈದ್ಯರು, ಎಂಜಿನಿಯರ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ. ಪರೀಕ್ಷೆ ನಡೆಸುವವರ ತಪ್ಪಿನಿಂದ ಉಂಟಾದ ತೊಂದರೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ವಿವಿಧ ಸಂಘಟನೆಗಳು ಟೀಕಿಸುವುದು ಸರಿಯಲ್ಲ ಎಂದರು.
ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ 105 ಕುಟುಂಬಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬೃಹತ್ ರಕ್ತದಾನ ಶಿಬಿರವೂ ನಡೆಯಿತು.
ಜಡೆ ಮಠದ ಡಾ. ಮಹಾಂತ ಸ್ವಾಮೀಜಿ, ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೂಡಿ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಡಾ. ಜ್ಞಾನೇಶ್, ರಾಜು ಎಂ. ತಲ್ಲೂರು, ಪ್ರಕಾಶ್ ಅಗಸನಹಳ್ಳಿ, ಕೋಟ್ರಯ್ಯ ಸ್ವಾಮಿ, ಪದ್ಮನಾಭ್, ಪಾಣಿ ರಾಜಪ್ಪ, ಬಸವನಗೌಡ ಮಲ್ಲಾಪುರ, ಮಂಜುನಾಥ ಹುರುಲಿಕೊಪ್ಪ, ವಿನಯ್ ಶರ್ವಿ, ಗಜಾನನ ರಾವ್, ಬಿ.ಎಚ್. ಕೃಷ್ಣಮೂರ್ತಿ, ಮಂಜಪ್ಪ ಲಕ್ಕವಳ್ಳಿ, ರಮೇಶ್ ಹಶ್ವಿ ಹಾಗೂ ಬಿ.ಎಸ್. ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.