ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಡಿಸಿಸಿ ಬ್ಯಾಂಕ್‌) ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಉಪಾಧ್ಯಕ್ಷರಾಗಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಭಾನುವಾರ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಡಿಸಿಸಿ ಬ್ಯಾಂಕ್‌) ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಉಪಾಧ್ಯಕ್ಷರಾಗಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಭಾನುವಾರ ಅವಿರೋಧವಾಗಿ ಆಯ್ಕೆಯಾದರು.

ಭಾನುವಾರ ಡಿಸಿಸಿ ಬ್ಯಾಂಕ್‌ನಲ್ಲಿ ನೂತನ ಆಡಳಿತ ಮಂಡಳಿ ಸಭೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಜಿಲ್ಲಾ ಕೋರ್‌ ಕಮಿಟಿ ಸಭೆಯ ತೀರ್ಮಾನದಂತೆ ಅಧ್ಯಕ್ಷ ಸ್ಥಾನಕ್ಕೆ ಸಿ,ಟಿ.ರವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಹೊಸೂರು ಮಾತ್ರ ನಾಮಪತ್ರ ಸಲ್ಲಿಸಿದ್ದರು, ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ನಟೇಶ್‌, ಅವಿರೋಧ ಆಯ್ಕೆ ಘೋಷಣೆ ಮಾಡಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಇದೇ ವೇಳೆ ಬ್ಯಾಂಕ್‌ಗ ನೂತನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

15 ವರ್ಷ ಕಿಂಗ್‌ ಮೇಕರ್‌ ಆಗಿ ಕಾರ್ಯ: ಸಿ.ಟಿ.ರವಿ

ಸಂಘಟನೆ ಒತ್ತಡ ಹಾಗೂ ಮಾಸ್‌ ಪೊಲಿಟಿಕ್ಸ್‌ನಿಂದ ಕಳೆದ 15 ವರ್ಷದಿಂದ ಸಹಕಾರಿ ಕ್ಷೇತ್ರದಲ್ಲಿ ಕಿಂಗ್‌ ಮೇಕರ್‌ ಆಗಿದೆ ಎಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ಬಾರಿಗೆ 1991ರಲ್ಲಿ ಆಲ್ದೂರು ವ್ಯವಸಾಯ ಸಹಕಾರ ಬ್ಯಾಂಕ್‌ನ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕನಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದೆ. ಸಂಘಟನೆ ಒತ್ತಡ ಹಾಗೂ ಮಾಸ್‌ ಪೊಲಿಟಿಕ್ಸ್‌ನಿಂದ ಸಹಕಾರ ಕ್ಷೇತ್ರದಲ್ಲಿ ಕಿಂಗ್‌ ಮೇಕರ್‌ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ಈ ಹಿಂದೆ ಡಿಸಿಸಿ ಬ್ಯಾಂಕ್‌ ನಿರ್ದೇಶಕನಾಗಿದ್ದಾಗ ಅಧ್ಯಕ್ಷರಾಗಬೇಕೆಂದು ಒತ್ತಡ ಇದ್ದರೂ ಸಹ ಪಕ್ಷದ ಜವಾಬ್ದಾರಿ ಹಿನ್ನೆಲೆಯಲ್ಲಿ ನಿರಾಕರಿಸಿದೆ. ಈಗ ಪಕ್ಷದ ಕೋರ್‌ ಕಮಿಟಿ ಜತೆಗೆ, ಬ್ಯಾಂಕ್‌ನ ಎಲ್ಲ ನಿರ್ದೇಶಕರ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಈ ಹಿಂದೆ ಬ್ಯಾಂಕ್‌ನಲ್ಲಿ ಡಿ.ಎಸ್.ಸುರೇಶ್, ಟಿ.ಎಲ್.ರಮೇಶ್. ಎಚ್.ಪಿ.ಸತೀಶ್, ಧರ್ಮೇಗೌಡ, ಬೋಜೇಗೌಡ, ರಾಜಶೇಖರ್, ರವೀಂದ್ರ, ಜಯರಾಮ, ಕಚೋಡಿ ಶ್ರೀನಿವಾಸ್, ರಮೇಶ್ ಹಾಗೂ ನಾರಾಯಣಗೌಡ ಸೇರಿದಂತೆ ಅನೇಕರ ಸೇವೆ ಮಾಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಯಾವುದೇ ಲೋಪವೆಸಗದಂತೆ ಪ್ರಾಮಾಣೀಕವಾಗಿ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಬ್ಯಾಂಕ್ ನೂತನ ಉಪಾಧ್ಯಕ್ಷ ದಿನೇಶ್ ಹೊಸೂರು ಮಾತನಾಡಿ, ಬ್ಯಾಂಕ್ ಹಿರಿಯರ ವಿಶ್ವಾಸಕ್ಕೆ ತಕ್ಕಂತೆ ಉಪಾಧ್ಯಕ್ಷ ಸ್ಥಾನ ವನ್ನು ನಿರ್ವಹಿಸುತ್ತೇನೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳ್ಳಿ ಪ್ರಕಾಶ್, ಹಳಸೆ ಶಿವಣ್ಣ, ಎಸ್.ಎಲ್.ಬೋಜೇಗೌಡ, ಸೋನಾಲ್‌ಗೌಡ, ಡಿ.ಎಸ್.ಸುರೇಶ್, ದಿನೇಶ್ ಹೆಗಡೆ, ಟಿ.ಎಲ್.ರಮೇಶ್, ಕೆ.ಆರ್.ಆನಂದಪ್ಪ, ಎಸ್.ವಿ.ಬಸವರಾಜ್, ಜಯಪಾಲ್, ಸತೀಶ್, ಬ್ಯಾಂಕ್ ಮುಖ್ಯಕಾರ್ಯಮನ ಪ್ರವೀಣ್ ಬಿ.ನಾಯ್ಕ್, ಚುನಾವಣಾಧಿಕಾರಿ, ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ಇದ್ದರು.