ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಪಾಲಿಸಿ: ವಿ.ಎಸ್. ಪಾಟೀಲ

| Published : Apr 02 2025, 01:04 AM IST

ಸಾರಾಂಶ

ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಅಶ್ವಾರೂಢ ಮೂರ್ತಿಯನ್ನು ಮಾಜಿ ಶಾಸಕ ವಿ.ಎಸ್.ಪಾಟೀಲ್ ಲೋಕಾರ್ಪಣೆ ಮಾಡಿದರು.

ಮುಂಡಗೋಡ: ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಉಳಿವಿಗಾಗಿ ಹೋರಾಡಿದವರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಹಿಂದೂ ಧರ್ಮದ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಕಲಕೇರಿ ಗ್ರಾಮದ ಶಿವಾಜಿ ವೃತ್ತದಲ್ಲಿ ಯುವ ಮರಾಠ ಪರಿಷತ್ ಮುಂದಾಳತ್ವದಲ್ಲಿ ತಾಲೂಕಿನ ಮರಾಠ ಸಮಾಜದ ಮುಖಂಡರ ಹಾಗೂ ಕಲಕೇರಿ, ಹೊನ್ನಿಕೊಪ್ಪ, ಅಂದಲಗಿ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಅಶ್ವಾರೂಢ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಭಾನುವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ದುಷ್ಟಚಟಗಳಿಂದ ದೂರ ಇದ್ದು, ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಬೇಕು. ಆಗ ಮಾತ್ರ ಇಂತಹ ಮಹಾನ್ ಪುರುಷರ ಪುತ್ಥಳಿ ಅನಾವರಣ ಮಾಡಿರುವುದು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮರಾಠ ಸಮಾಜದ ಹಿರಿಯ ಮುಖಂಡ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶ ಭಕ್ತನಾಗಿದ್ದು, ತನ್ನ ಪರಾಕ್ರಮ ಹಾಗೂ ಶೌರ್ಯದಿಂದ ಮರಾಠ ಸಾಮಾಜ್ಯ ಸ್ಥಾಪಿಸಿ, ಜನಸಾಮಾನ್ಯರ ಚಕ್ರವರ್ತಿಯಾಗಿದ್ದರು. ಅವರ ಅದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜದ ಯುವ ಮುಖಂಡ ಮಂಜುನಾಥ ಕೀರ್ತಪ್ಪನವರ ಮಾತನಾಡಿ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದುಸ್ತಾನ ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿತು. ಹಾಗಾಗಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂಥದ್ದು ಎಂದು ಶಿವಾಜಿ ಮಹಾರಾಜರ ಜೀವನ ಚರಿತ್ರೆ ಬಗ್ಗೆ ವಿಸ್ತಾರವಾಗಿ ಹೇಳಿದರು.

ಮುಂಡಗೋಡ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ವೈ.ಪಿ. ಭುಜಂಗಿ, ತಾಲೂಕು ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಚೇತನ್ ನಾಯ್ಕ್, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಮರಾಠಾ ಸಮಾಜದ ಮುಖಂಡರಾದ ಡಿ.ಎಫ್. ಮಡ್ಲಿ, ಲಕ್ಷ್ಮಣ ಬೆಂಡಿಗೇರಿ, ಸಿದ್ದಣ್ಣ ಕ್ಯಾತನಹಳ್ಳಿ, ನಾಗರಾಜ ಬೆಣ್ಣಿ, ನಾಗರಾಜ ಸಂಕನಾಳ, ಪ್ರವೀಣ ಡವಳೆ, ನಾರಾಯಣ ಗುರಪ್ಪನವರ, ಮಾರುತಿ ಬನವಾಸಿ, ನಾರಾಯಣ ಕ್ಯಾತನಹಳ್ಳಿ, ಕರಿಯಣ್ಣ ಪಾಟೀಲ, ಮಂಜುನಾಥ ಬಿಸಗಣ್ಣವರ, ಚಂದ್ರು ಉಗ್ಗಿನಕೇರಿ, ಸುನೀಲ ವಾಗು ಸಳಕೆ, ವಿಠ್ಠಲ ಬಾಳಂಬೀಡ, ಗಿರೀಶ ಓಣಿಕೇರಿ ಮುಂತಾದವರು ಉಪಸ್ಥಿತರಿದ್ದರು. ಕಲಕೇರಿ ಗ್ರಾಮದ ಶಾಲಾ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ರಾಮಮೂರ್ತಿ ಎರೆಬೈಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.