ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಮಾಜಿಕ ಹೊಣೆಗಾರಿಕೆಯಲ್ಲಿ ಕೆನರಾ ಬ್ಯಾಂಕ್ ಸದಾ ಮುಂದಿರುತ್ತದೆ ಎಂದು ಕೆನರಾ ಬ್ಯಾಂಕ್ ಮಣಿಪಾಲ್ ವೃತ್ತ ಕಚೇರಿಯ ಮಹಾ ಪ್ರಬಂಧಕ ಗಂಗಾಧರ ಹೇಳಿದರು.

ಅವರು ಬುಧವಾರ ಸನ್ಯಾಸಿ ಕೋಡಮಗ್ಗಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಗ್ರಾಮ ದತ್ತು ಸ್ವೀಕಾರ ಯೋಜನೆಯಲ್ಲಿ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಕೆನರಾ ಬ್ಯಾಂಕ್‌ನಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕೆನರಾ ಬ್ಯಾಂಕ್ ಶಿವಮೊಗ್ಗ ಜಿಲ್ಲೆಗೆ ಮನೆ ಮಾತಾಗಿದೆ ಎಂದರು.

ನಮ್ಮ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕೇವಲ ಲಾಭಕ್ಕಾಗಿ ಬ್ಯಾಂಕನ್ನು ಪ್ರಾರಂಭ ಮಾಡದೆ ಸಾಮಾಜಿಕವಾಗಿ ಸಾರ್ವಜನಿಕರಿಗೆ ಕೊಡುಗೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಬ್ಯಾಂಕನ್ನು ಪ್ರತಿ ಹಳ್ಳಿಯ ಜನರಿಂದ ಶೇರಿನ ಮೊತ್ತವನ್ನು ಪಡೆದುಕೊಂಡು ಕೇವಲ ಎರಡು ಸಾವಿರ ಠೇವಣಿಯೊಂದಿಗೆ ಪ್ರಾರಂಭಗೊಂಡು ಸುಮಾರು 20 ಲಕ್ಷ ಕೋಟಿ ರು. ವಹಿವಾಟನ್ನು ಇಂದು ಹೊಂದಿದೆ ಎಂದು ತಿಳಿಸಿದರು.

ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ನಮ್ಮ ಬ್ಯಾಂಕಿನಿಂದ ಪ್ರತಿ ವರ್ಷ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ವಿದ್ಯಾನಿಧಿಯನ್ನು ನೀಡುತ್ತಾ ಬಂದಿದೆ. ಲಾಭದ ಬದಲು ಸಾಮಾಜಿಕವಾಗಿ ಸಾರ್ವಜನಿಕರು ಅಭಿವೃದ್ಧಿ ಹೊಂದಲು ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ದೈನಂದಿನ ಚಟುವಟಿಕೆಗಳಿಗೆ ನೀರು ಬಹಳ ಅಮೂಲ್ಯ. ನೀರನ್ನು ಹಿತ ಹಾಗೂ ಮಿತವಾಗಿ ಬಳಸಬೇಕು. ಇಂದು ಪ್ರಾರಂಭವಾಗಿರುವ ಕುಡಿಯುವ ನೀರಿನ ಘಟಕ ಗ್ರಾಮಸ್ಥರಿಗೆ ಸದ್ಬಳಕೆ ಆಗಬೇಕು ಎಂದು ಆಶಿಸಿದರು. ಸುಮಾರು 127 ಪ್ರಾದೇಶಿಕ ಕಚೇರಿಯಿಂದ 127 ಹಳ್ಳಿಗಳನ್ನು ದತ್ತು ಪಡೆದುಕೊಂಡು 200 ಕೋಟಿ ರು. ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿಗೆ ಕೆನರಾ ಬ್ಯಾಂಕ್ ಶ್ರಮಿಸುತ್ತಿದೆ. ಕೆನರಾ ಬ್ಯಾಂಕ್ ಸ್ವಉದ್ಯೋಗ ಪ್ರಾರಂಭಿಸಲು ಸಾರ್ವಜನಿಕರಿಗೆ ಉಚಿತವಾಗಿ ತರಬೇತಿಯನ್ನು ನೀಡಿ ಆರ್ಥಿಕವಾಗಿ ಸಹಾಯವನ್ನು ನೀಡುತ್ತಿದೆ. ಪ್ರತಿ ಜಿಲ್ಲೆಯಿಂದ ಬಂದಂತಹ ಲಾಭವನ್ನು ಸಿಎಸ್ಆರ್ ಚಟುವಟಿಕೆ ಮುಖಾಂತರ ಸಾರ್ವಜನಿಕರಿಗೆ ನೀಡುತ್ತಿದೆ ಎಂದರು.


ಈ ಸಂದರ್ಭದಲ್ಲಿ ಶಿವಮೊಗ್ಗ ಪ್ರಾದೇಶಿಕ ಕಾರ್ಯಾಲಯದ ಮುಖ್ಯಸ್ಥ ಆರ್. ದೇವರಾಜ್, ವಿಭಾಗೀಯ ವ್ಯವಸ್ಥಾಪಕ ವೀರ ರಾಘವನ್, ಹಿರಿಯ ವ್ಯವಸ್ಥಾಪಕ ಪ್ರಶಾಂತ್, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹನುಮಂತಪ್ಪ, ಕೆನರಾ ಬ್ಯಾಂಕ್ ಉದ್ಯೋಗಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.