- ರೋಸ್ಟರ್ ಬಿಂದು ಪದ್ಧತಿ ಕೈಬಿಡುವಂತೆ ಆಗ್ರಹ
- ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷ ಒತ್ತಾಯ---
ಕನ್ನಡಪ್ರಭ ವಾರ್ತೆ ಚಾಮರಾಜನಗರಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸಬೇಕು. ರೋಸ್ಟರ್ ಬಿಂದು ಪದ್ಧತಿ ರದ್ದುಪಡಿಸಬೇಕು ಎಂಬುದೇ ನಮ್ಮ ಒತ್ತಾಯ ಹೊರತು ಒಳ ಮೀಸಲಾತಿ ವಿರುದ್ಧವಲ್ಲ ಎಂದು ತಾಲೂಕು ಅಂಬೇಡ್ಕರ್ ಮಹಾಸಭಾದ ಕಾರ್ಯಾಧ್ಯಕ್ಷ ಸಿ.ಕೆ. ಮಂಜುನಾಥ್ ಅಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಒಳ ಮೀಸಲಾತಿ ಅನ್ಯಾಯ ಖಂಡಿಸಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿಯೂ ಬಲಗೈ ಸಮುದಾಯದ ಮೂವರು ಸಚಿವರು ಭಾಗವಹಿಸದೇ ನಿರ್ಲಕ್ಷಿಸಿದ್ದಾರೆ. ಅಸ್ಪೃಶ್ಯತೆ ನೋವುಂಡವರಿಗೆ ಮೀಸಲಾತಿಯ ಮಹತ್ವ ಗೊತ್ತಾಗುತ್ತದೆ ಎಂದರು.ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಒಳಮೀಸಲಾತಿ ಜಾರಿಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೂಕ್ಷ್ಮವಾಗಿ ಗಮನಿಸದೆ ಸಹಿ ಹಾಕಿದ್ದಾರೆ. ಆಗಸ್ಟ್ನಲ್ಲಿಯೇ ಒಳಮೀಸಲಾತಿ ಜಾರಿಯಾಗಿದೆ ಎಂದರು.ಅಕ್ಟೋಬರ್ನಲ್ಲಿ ರೋಸ್ಟರ್ ಬಿಂದು ಆದೇಶವಾಗಿದೆ. ಇದರಿಂದಾಗಿ ಬಲಗೈ ಸಮುದಾಯವನ್ನು ರೋಸ್ಟರ್ ಬಿಂದುವಿನಲ್ಲಿ ೯ನೇ ಸ್ಥಾನಕ್ಕೆ ಹಾಕಲಾಗಿದೆ. ಕೂಡಲೇ ಈ ಎರಡು ಆದೇಶಗಳನ್ನು ತಡೆ ಹಿಡಿಯಬೇಕು. ಈ ಸಂಬಂಧ ಬಿಜೆಪಿ ನಾಯಕರು ಕೂಡ ಒಂದು ಜನಾಂಗವನ್ನು ಓಲೈಕೆ ಮಾಡದೇ ಅನ್ಯಾಯ ಸರಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಮಾಡಿದರು.ಸಿಎಂ ಸಿದ್ದರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸಚಿವರಿಗೆ ಮಾತನಾಡಲು ಧೈರ್ಯವಿಲ್ಲ. ಮಾದಿಗ ಸಮಾವೇಶಕ್ಕೂ ಬಾರದ ಸಿಎಂ, ನಿನ್ನೆ ನಡೆದ ಬೃಹತ್ ಪ್ರತಿಭಟನೆಗೂ ಬಾರದೇ ಜನಾಂಗದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ದೂರಿದರು.ಬುಧವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯು ಯಶಸ್ವಿಯಾಗಿದ್ದು, ಅನ್ಯಾಯ ಖಂಡಿಸಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಸಿಎಂ ಬರುವರೆಂದು ನಿರೀಕ್ಷಿಸಿದ್ದೆವು. ಆದರೆ ಅವರು ಬರಲಿಲ್ಲ. ಜ್ಞಾನಪ್ರಕಾಶ್ ಸ್ವಾಮೀಜಿಯವರ ಮನವಿ ಬೆಲೆ ಕೊಟ್ಟು ಬರಬೇಕಾಗಿತ್ತು. ಸುತ್ತೂರು, ಆದಿ ಚುಂಚನಗಿರಿ ಸ್ವಾಮೀಜಿ ಕರೆದಿದ್ದರೆ ಹೋಗುತ್ತಿದ್ದಿರಿ. ಇವರು ತಳ ಸಮುದಾಯದ ಸ್ವಾಮಿಯಾದ್ದರಿಂದ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
೫೬ ಸಾವಿರ ಹುದ್ದೆಗಳ ನೇಮಕಾತಿಗೆ ಮಾತ್ರ ತಡೆಯಾಗಿದೆ. ಆದರೆ ಇನ್ನುಳಿದಂತೆ ಒಳಮೀಸಲಾತಿ ಜಾರಿಯಲ್ಲಿದೆ. ಎರಡು ಆದೇಶಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಹಳೆ ಮೀಸಲಾತಿಯಂತೆ ನೇಮಕಾತಿ ನಡೆಯಬೇಕು.
ಒಳಮೀಸಲಾತಿ ಜಾರಿ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಇದರೊಂದಿಗೆ ರೋಸ್ಟರ್ ಬಿಂದುವನ್ನು ನ್ಯಾಯಯುತವಾಗಿ ಜಾರಿಗೊಳಿಸಿ ಎಂದು ಒತ್ತಾಯಿಸಬೇಕು ಎಂದರು.
ಇದೇ ಸಮಯದಲ್ಲಿ ಬೆಂಗಳೂರಿನ ಸಮಾವೇಶದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭಾಷಣಕ್ಕೆ ಅಡ್ಡಿಪಡಿಸಿರುವುದನ್ನು ಖಂಡಿಸಿದರು.ಈ ವೇಳೆ ಮುಖಂಡರಾದ ಮೂಡ್ನಾಕೂಡು ಪ್ರಕಾಶ್, ಶಿವಸ್ವಾಮಿ, ಸಿದ್ದರಾಜು, ರಮೇಶ್, ಬಾಬು, ರಂಗಸ್ವಾಮಿ ಇದ್ದರು,
---೨೬ಸಿಎಚ್ಎನ್೩ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಂಬೇಡ್ಕರ್ ಮಹಾಸಭಾದ ಕಾರ್ಯಾಧ್ಯಕ್ಷ ಸಿ.ಕೆ. ಮಂಜುನಾಥ್ ಮಾತನಾಡಿದರು.