ಸರ್ವರ್, ನೆಟವರ್ಕ್ ಮತ್ತಿತರ ಕಾರಣಗಳಿಂದ ತಾಲೂಕಿನ ಕೆಲ ಪಂಚಾಯಿತಿಗಳಲ್ಲಿ ಭಾರತ್ ಜೋಡೋ ಸಂಘದ ನೋಂದಣಿ ಕಡಿಮೆಯಾಗಿದ್ದರಿಂದ ಲಿಖಿತವಾಗಿ ಅರ್ಜಿ ತುಂಬಿ ನೋಂದಣಿಗೆ ಅವಕಾಶ ನೀಡಲಾಗಿದ್ದು, ತಕ್ಷಣ ಯುವಜನತೆ ಸಂಘ ನೋಂದಣಿ ಮಾಡಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಸಿದ್ದಾಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅತಿಕ್ರಮಣ ಹಾಗೂ ಸರ್ಕಾರಿ ಜಾಗದಲ್ಲಿರುವ ಮನೆ ನಂಬರ್‌ಗಳನ್ನು ರದ್ದುಗೊಳಿಸಿ ತೆರಿಗೆ ಆಕರಣೆ ಮಾಡದಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ ಮುಂದಾಗಿದೆ ಎಂಬ ವಿಷಯ ಗಮನಕ್ಕೆ ಬಂದಿದ್ದು, ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿರ್ಧಾರ ಕೈಬಿಡುವಂತೆ ಒತ್ತಾಯಿಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಸೋಮವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಯಲ್ಲಿ ಭಾರತ್ ಜೋಡೋ ಸಂಘ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿ ರಚನೆ ಕುರಿತು ಸಭೆ ನಡೆಸಿ ಮಾತನಾಡಿ, ಉತ್ತರ ಕನ್ನಡಜಿಲ್ಲೆ ಶೇ. 80ಕ್ಕೂ ಅಧಿಕ ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿಯ ಬಹುತೇಕ ಗ್ರಾಮ ಪಂಚಾಯಿತಿ, ಸರ್ಕಾರಿ ಕಟ್ಟಡಗಳು ಸಹ ಅತಿಕ್ರಮಣ ಜಾಗದಲ್ಲಿಯೇ ಇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಈ ನಿರ್ಧಾರ ಜಿಲ್ಲೆಯ ಜನರ ಅಳಿವು- ಉಳಿವಿನ ಪ್ರಶ್ನೆಯಾಗಿದೆ. ತಕ್ಷಣ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಇಲ್ಲಿಯ ವಾಸ್ತವಿಕತೆಯನ್ನು ತಿಳಿಸಿ ಕೂಡಲೇ ಸಚಿವರಿಗೆ ಸೂಚನೆ ನೀಡಿ ಈ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಲಾಗುವುದು ಎಂದರು.

ಸರ್ವರ್, ನೆಟವರ್ಕ್ ಮತ್ತಿತರ ಕಾರಣಗಳಿಂದ ತಾಲೂಕಿನ ಕೆಲ ಪಂಚಾಯಿತಿಗಳಲ್ಲಿ ಭಾರತ್ ಜೋಡೋ ಸಂಘದ ನೋಂದಣಿ ಕಡಿಮೆಯಾಗಿದ್ದರಿಂದ ಲಿಖಿತವಾಗಿ ಅರ್ಜಿ ತುಂಬಿ ನೋಂದಣಿಗೆ ಅವಕಾಶ ನೀಡಲಾಗಿದ್ದು, ತಕ್ಷಣ ಯುವಜನತೆ ಸಂಘ ನೋಂದಣಿ ಮಾಡಿಕೊಳ್ಳಬೇಕು ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ಭಾರತ್ ಜೋಡೋ ಯುವ ಸಂಘದ ನೋಂದಣಿಗೆ ಎಲ್ಲರೂ ಸಹಕಾರ ನೀಡಿ. ಸಂಘದ ನೋಂದಣಿ ಕ್ಷಿಪ್ರಗತಿಯಲ್ಲಿ ನಡೆಸಬೇಕಿದೆ. ಜತೆಗೆ ಗ್ರಾಮ ಪಂಚಾಯಿತಿ ಮಟ್ಟದ ಪಂಚ ಗ್ಯಾರಂಟಿ ಸಮಿತಿಯನ್ನು ಸಾಮಾಜಿಕ ನ್ಯಾಯದಡಿಯಲ್ಲಿ ರಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವೀರಭದ್ರ ನಾಯ್ಕ, ಎಸ್.ಆರ್. ರವಿಕುಮಾರ, ಜಿಪಂ ಮಾಜಿ ಸದಸ್ಯ ವಿ.ಎನ್. ನಾಯ್ಕ ಉಪಸ್ಥಿತರಿದ್ದರು.