ಸಾರಾಂಶ
೧೫ ಕೇಂದ್ರಗಳಲ್ಲಿ ಒಟ್ಟೂ 3064 ಹುದ್ದೆಗಳ ಲಿಖಿತ ಪರೀಕ್ಷೆ ಭಾನುವಾರ ನಡೆಯಲಿದ್ದು, ಬೆಳಗಾವಿ, ಗೋಕಾಕ, ಕಲಬುರಗಿ, ಹಾವೇರಿ ಒಳಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಂದ ಶನಿವಾರವೇ ನಗರಕ್ಕೆ ೬ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ್ದಾರೆ.
ಕಾರವಾರ:
ನಗರಕ್ಕೆ ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆ ಲಿಖಿತ ಪರೀಕ್ಷೆ ಬಂದ ವಿದ್ಯಾರ್ಥಿಗಳು ಉಳಿದುಕೊಳ್ಳು ಜಾಗವಿಲ್ಲದೇ ಪರದಾಡುವಂತಾಯಿತು.ಭಾನುವಾರ ೧೫ ಕೇಂದ್ರಗಳಲ್ಲಿ ಒಟ್ಟೂ 3064 ಹುದ್ದೆಗಳ ಲಿಖಿತ ಪರೀಕ್ಷೆ ಭಾನುವಾರ ನಡೆಯಲಿದ್ದು, ಬೆಳಗಾವಿ, ಗೋಕಾಕ, ಕಲಬುರಗಿ, ಹಾವೇರಿ ಒಳಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಂದ ಶನಿವಾರವೇ ನಗರಕ್ಕೆ ೬ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ್ದು, ಕಾರಣ ವಸತಿಗೆ ಸಮಸ್ಯೆಯಾಗಿ ಅಭ್ಯರ್ಥಿಗಳು ಪರದಾಡುವಂತಾಯಿತು.ಅಂದಾಜು ನಾಲ್ಕರಿಂದ ನಾಲ್ಕುವರೆ ಸಾವಿರ ಅಭ್ಯರ್ಥಿಗಳು ಲಾಡ್ಜ್ಗಳಲ್ಲಿ ಉಳಿದುಕೊಂಡಿದ್ದರು. ಉಳಿದ ಒಂದರಿಂದ ಒಂದುವರೆ ಸಾವಿರ ಜನರು ವಸತಿ ಇಲ್ಲದೇ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ರವೀಂದ್ರನಾಥ ಟಾಗೋರ್ ಕಡಲತೀರ, ಮಯೂರ ವರ್ಮ ವೇದಿಕೆ ಒಳಗೊಂಡು ವಿವಿಧ ಕಡೆ ಇದ್ದರು.
ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಇಲ್ಲದೇ ಇರುವುದನ್ನು ಗಮನಿಸಿದ ನಗರ ಹಾಗೂ ಸಂಚಾರಿ ಠಾಣೆಯ ಪೊಲೀಸರು ತಮ್ಮಗೆ ತಿಳಿದ್ದ ಸಭಾಂಗಣದ ಮಾಲಿಕರಿಗೆ ಕರೆ ಮಾಡಿ ವ್ಯವಸ್ಥೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ದೈವಜ್ಞ ಸಭಾಂಗಣದಲ್ಲಿ ವಸತಿಗೆ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದರು.ಅವೈಜ್ಞಾನಿಕ ನಿರ್ಧಾರ:
ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿರುವುದರಿಂದ ಬೆಂಗಳೂರಿನ ಎಡಿಜಿಪಿ ಕಚೇರಿಯಿಂದ ಒಂದು ಜಿಲ್ಲೆಗೆ ಎಷ್ಟು ಪರೀಕ್ಷಾರ್ಥಿಗಳು ಎನ್ನುವ ಸಂಖ್ಯೆ ನಿರ್ಧಾರ ಮಾಡಲಾಗುತ್ತದೆ. ಆದರೆ ನಿಗದಿತ ನಗರದ ವಿಸ್ತೀರ್ಣದ ಪರಿಕಲ್ಪನೆ ಇಲ್ಲದೇ ಸಾಮರ್ಥ್ಯಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರದಿಂದ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪರೀಕ್ಷೆ ನಡೆಸಲು ಅವಕಾಶವಿದ್ದು, ಈ ನಿಯಮ ಬದಲಿಸಿ ಅಕ್ಕಪಕ್ಕದ ತಾಲೂಕಿಗೆ ಅಥವಾ ಜಿಲ್ಲಾ ಕೇಂದ್ರದ ವಸತಿ ಸಾಮರ್ಥ್ಯದ ಮಾಹಿತಿ ಪಡೆದು ಪರೀಕ್ಷಾರ್ಥಿಗಳ ಸಂಖ್ಯೆ ನಿಗದಿ ಮಾಡಬೇಕಿದೆ.