ಕ್ಯಾಂಟರ್‌-ಬೈಕ್‌ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

| Published : May 30 2024, 12:56 AM IST

ಸಾರಾಂಶ

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಕನಕದಾಸ ವೃತ್ತ( ಕೆಸಿಪಿ ಛತ್ರದ ಮುಂಭಾಗ) ಬುಧವಾರ ಸಂಜೆ ನಡೆದಿದೆ.

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಕನಕದಾಸ ವೃತ್ತ( ಕೆಸಿಪಿ ಛತ್ರದ ಮುಂಭಾಗ) ಬುಧವಾರ ಸಂಜೆ ನಡೆದಿದೆ.

ಮೃತನನ್ನು ರಂಗಪ್ಪ ಸರ್ಕಲ್ ನಿವಾಸಿ ಉಮೇಶ್(51) ಎಂದು ಗುರುತಿಸಲಾಗಿದೆ. ಮೃತ ಬೈಕ್ ಸವಾರ ಅರಳುಮಲ್ಲಿಗೆಯಿಂದ ದ್ವಿಚಕ್ರ ವಾಹನದಲ್ಲಿ ಮಗನೊಂದಿಗೆ ನಗರಕ್ಕೆ ಬರುವಾಗ ಅದೇ ಮಾರ್ಗವಾಗಿ ಬಂದ ಕ್ಯಾಂಟರ್ ವಾಹನ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನದ ಕನ್ನಡಿಗೆ ಬಡಿದಿದೆ‌. ಈ ವೇಳೆ ಬೈಕ್ ಸವಾರ ಉಮೇಶ್ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದ್ವಿಚಕ್ರ ವಾಹನದಲ್ಲಿದ್ದ ಉಮೇಶ್ ಅವರ 14 ವರ್ಷದ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನೇಕಾರ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಈ ಹಿಂದೆ ಕರೇನಹಳ್ಳಿಯಲ್ಲಿ ವಾಸವಿದ್ದರು. ಈಚೆಗೆ ರಂಗಪ್ಪ ಸರ್ಕಲ್ ನಲ್ಲಿ ಮನೆ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಮಯಕ್ಕೆ ಬಾರದ ಆ್ಯಂಬ್ಯುಲೆನ್ಸ್‌: ಆಕ್ರೋಶ

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಜನಪರ ಮಂಜುನಾಥ್, ಕೂಡಲೇ ಆ್ಯಂಬುಲೆನ್ಸ್ ಬಂದಿದ್ದರೆ ಪ್ರಾಣ ಉಳಿಸಬಹುದಿತ್ತು. ಅರ್ಧ ಗಂಟೆಯಾದರೂ ಆ್ಯಂಬುಲೆನ್ಸ್ ಬಾರದ ಕಾರಣ ಗಾಯಾಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತೀಚೆಗೆ ಸರ್ಕಾರಿ ಆ್ಯಂಬುಲೆನ್ಸ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ತುರ್ತು ಪರಿಸ್ಥಿತಿಗಳಲ್ಲಿ ಕರೆ ಮಾಡಿದರೆ ಖಾಸಗಿ ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಬರುತ್ತಿವೆ. ಅವಘಡಕ್ಕೆ ಒಳಗಾದವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆ ಮೂಲಕ ಸಂಕಷ್ಟದಲ್ಲಿರುವ ಕುಟುಂಬವನ್ನು ಸುಲಿಗೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

29ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.