ಸಾರಾಂಶ
ಶ್ರೀರಂಗಪಟ್ಟಣ: ಚಾಲಕನ ನಿಯಂತ್ರಣ ತಪ್ಪಿ ಕಾರು ಭೀಕರ ಅಪಘಾತಕ್ಕೀಡಾಗಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಗಣಂಗೂರು ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಬೆಂಗಳೂರಿನ ವಿಕ್ರಂ ತಮ್ಮ ಕುಂಟುಂಬ ಸದಸ್ಯರೊಂದಿಗೆ ಮೈಸೂರಿಗೆ ತೆರಳಿ ವಾಪಸ್ ಬೆಂಗಳೂರು ಕಡೆಗೆ ಬರುತ್ತಿದ್ದ ವೇಳೆ ಗಣಂಗೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿ ವಿಕ್ರಂ ಹಾಗೂ ತಾಯಿ, ಹೆಂಡತಿ, ಅಜ್ಜಿ ಜೊತೆಗೆ 7 ರಿಂದ 8 ವರ್ಷದ ಮಗು ಇದ್ದುದ್ದಾಗಿ ತಿಳಿದು ಬಂದಿದೆ. ತಾಲೂಕಿನ ಗಣಂಗೂರು ಬಳಿ ಆಗಮಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಎಡಭಾಗದ ಡಿವೈಡರ್ ಗುದ್ದಿದ ಪರಿಣಾಮ ಕಾರು ಪಲ್ಟಿಯಾಗಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿತ್ತು. ತಕ್ಷಣ ಹೆದ್ದಾರಿ ನಿರ್ವಹಣೆಯವರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡಿದ್ದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಷಯ ತಿಳಿದ ಶ್ರೀರಂಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.