ಸಾರಾಂಶ
ಚಾಮರಾಜನಗರ: ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದವರ ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ. ಮೈಸೂರಿನ ರಮಾಬಾಯಿ ನಗರದ ನಿವಾಸಿಗಳಾದ ನಂದನ್ ಹಾಗೂ ಜೀವನ್ ಎಂಬವರು ಮೃತರು. ರಮಾಬಾಯಿನಗರದ ಶಶಾಂಕ್, ವಿದ್ಯಾರಣ್ಯಪುರಂನ ಧನುಷ್ ಹಾಗೂ ಗುಂಡ್ಲುಪೇಟೆ ತಾಲೂಕಿನ ಬೆಳವಾಡಿಯ ಸುನೀಲ್ ಎಂಬವರು ತೀವ್ರವಾಗಿ ಗಾಯಗೊಂಡು ಚಾಮರಾಜನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲ ಚಾಮರಾಜನಗರ ತಾಲೂಕಿನ ಬೆಜ್ಜಲಪಾಳ್ಯದಲ್ಲಿ ಭಾನುವಾರ ನಡೆಯಲಿದ್ದ ವಿವಾಹಕ್ಕೆ ತಡರಾತ್ರಿ ಮದುವೆ ಮನೆಯಿಂದ ಪುಣಜನೂರಿಗೆ ತೆರಳಿ, ವಾಪಸ್ ಮದುವೆ ಮನೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದಾಗ ಚೆಕ್ ಪೋಸ್ಟ್ ಸಮೀಪ ಮರಕ್ಕೆ ಕಾರು ಡಿಕ್ಕಿಯಾಗಿ ಈ ಅವಘಡ ಉಂಟಾಗಿದೆ. ಎಲ್ಲರೂ ವಿದ್ಯಾರ್ಥಿಗಳಾಗಿದ್ದು, ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಸ್ಧಳಕ್ಕೆ ಎಸ್ಪಿ ಡಾ. ಬಿ.ಟಿ. ಕವಿತಾ, ಎಎಸ್ಪಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಣ್, ಇನ್ಸ್ಪೆಕ್ಟರ್ ನವೀನ್ ಭೇಟಿ ನೀಡಿದ್ದರು.