ಏತ ನೀರಾವರಿಗಾಗಿ ನಾನು ನಿಮ್ಮೊಂದಿಗೆ ಪಾದಯಾತ್ರೆ ಮಾಡಿದ ಫಲವಾಗಿ, ಜಿಲ್ಲೆಗೆ 1850 ಕೋಟಿ ರು. ಹಣ ತರಲು ಸಾಧ್ಯವಾಯಿತು. ಜನರ ಹೋರಾಟದ ಫಲವಾಗಿ ನಿರ್ಮಾಣಗೊಂಡ ಯೋಜನೆಯ ಲಾಭ, ಜನರಿಗೆ ಆಗಬೇಕು. ಏತ ನೀರಾವರಿಯಲ್ಲಿ ಆಗಬೇಕಾದ ದುರಸ್ತಿ ಕೆಲಸಗಳು ಸಕಾಲಕ್ಕೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಎಸ್‌. ಮಧು ಬಂಗಾರಪ್ಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಏತ ನೀರಾವರಿಗಾಗಿ ನಾನು ನಿಮ್ಮೊಂದಿಗೆ ಪಾದಯಾತ್ರೆ ಮಾಡಿದ ಫಲವಾಗಿ, ಜಿಲ್ಲೆಗೆ 1850 ಕೋಟಿ ರು. ಹಣ ತರಲು ಸಾಧ್ಯವಾಯಿತು. ಜನರ ಹೋರಾಟದ ಫಲವಾಗಿ ನಿರ್ಮಾಣಗೊಂಡ ಯೋಜನೆಯ ಲಾಭ, ಜನರಿಗೆ ಆಗಬೇಕು. ಏತ ನೀರಾವರಿಯಲ್ಲಿ ಆಗಬೇಕಾದ ದುರಸ್ತಿ ಕೆಲಸಗಳು ಸಕಾಲಕ್ಕೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಎಸ್‌. ಮಧು ಬಂಗಾರಪ್ಪ ಸೂಚಿಸಿದರು.

ಶನಿವಾರ ಹಂಚಿ, ಕುಣೆತೆಪ್ಪ, ಭಾರಂಗಿ, ಗುಡ್ಡದಬೆಣ್ಣಿಗೆರೆ ಗ್ರಾಮಗಳ ತಲಾ 50 ಲಕ್ಷ ರು.ಗಳ ಕಾಂಕ್ರೀಟ್‌ ರಸ್ತೆ ಸೇರಿ ಒಟ್ಟು 4 ಕೋಟಿ ರು.ಗಳ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಏತ ನೀರಾವರಿ ಯೋಜನೆ ಅನುಸಾರ ಕೆಲವು ಕೆರೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಮಳೆಗಾಲದಲ್ಲಿ ಪೈಪ್‌ಲೈನ್‌ಗಳು ಒಡೆದು ಹೋಗಿ, ಕೆರೆಗಳಿಗೆ ನೀರು ತಲುಪುತ್ತಿಲ್ಲ ಎಂಬ ಗ್ರಾಮಸ್ಥರ ದೂರು ಆಲಿಸಿದ ಸಚಿವರು ವಾರದಲ್ಲೆ ಸಭೆ ಕರೆಯುವಂತೆ ಅಧಿಕಾರಿಗೆ ತಾಕೀತು ಮಾಡಿದರು.

ತಳ ಹಂತದಿಂದ ಜನರ ಜೀವನ ಸುಧಾರಿಸಲು ಮತ್ತು ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ನಿಟ್ಟಿನಲ್ಲಿ ತಂದೆ ಬಂಗಾರಪ್ಪ ಅವರ ಆಡಳಿತ ಅವಧಿಯಲ್ಲಿ ರೈತರಿಗೆ ಉಚಿತ ವಿದ್ಯುತ್‌ ನೀಡಿದರು. ಇದರಿಂದ ಇಂದು ರೈತರು ಅಡಿಕೆ ಮುಂತಾದ ಬೆಳೆಗಳನ್ನು ಬೆಳೆದು ನೆಮ್ಮದಿ ಬದುಕು ನಡೆಸುವಂತಾಗಿದೆ. ಬಡವರು, ಮಧ್ಯಮ ವರ್ಗ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ನೆಮ್ಮದಿ ಬದುಕು ನಡೆಸಲು ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ಜೀವನ ಮಟ್ಟ ಸುಧಾರಿಸಲು ಕಾಂಗ್ರೆಸ್‌ ಪಕ್ಷ ಯೋಜನೆಗಳನ್ನು ಮಾಡಿದ್ದು, ಜನರು ಸದಾ ಸ್ಮರಿಸುವ ಜೊತೆಗೆ ನಮಗೆ ಸದಾ ಆರ್ಶೀವಾದ ಮಾಡುತ್ತಿರಬೇಕು ಆಗ ನಾವು ಇನ್ನೂ ಜನರ ಸೇವೆ ಮಾಡಲು ಶಕ್ತಿ ಹೆಚ್ಚಾಗುತ್ತದೆ ಎಂದರು.

ಹಿರೇಮಾಗಡಿಯಿಂದ ಹಂಚಿ ತಾಂಡದವರೆಗಿನ ರಸ್ತೆ ಹಾಗೂ ಕುಣೆತೆಪ್ಪ ಮುಖ್ಯ ರಸ್ತೆಗಳಿಗೆ ಶೀಘ್ರದಲ್ಲೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಪಿ ರುದ್ರಗೌಡ ಗಿಣಿವಾಲ ಮಾತನಾಡಿ, ತಾಲೂಕಿನ ಗಡಿಭಾಗದ ಹಂಚಿ ಗ್ರಾಮ ಪಂಚಾಯಿತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಸಚಿವ ಮಧು ಬಂಗಾರಪ್ಪ ಅವರ ಕಾಳಜಿ ಮೇರೆಗೆ ಕೊಳವೆ ಬಾವಿ ಕೊರೆಸಲಾಗಿದೆ, ಆದರೆ ಕೊಳವೆ ಬಾವಿಯಲ್ಲಿ ನೀರು ಬಿದ್ದಿಲ್ಲ. ಹಾಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಅದರಲ್ಲೂ ಜೂನ್‌ ತಿಂಗಳಲ್ಲಿ ತುಂಬ ಕುಡಿಯುವ ನೀರಿಗಾಗಿ ಜನರು ಸಂಕಷ್ಟ ಪಡಬೇಕಾಗಿದೆ. ಮೇ-ಜೂನ್‌ ತಿಂಗಳಲ್ಲಿ ಕುಡಿಯುವ ನೀರಿಗಾಗಿ ವಿಶೇಷ ಅನುದಾನ ಒದಗಿಸುವಂತೆ ಸಚಿವ ಮಧು ಬಂಗಾರಪ್ಪ ಅವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸದಾನಂದ ಗೌಡ ಬಿಳಗಲಿ, ಶಿವಲಿಂಗೇಗೌಡ, ಗಣಪತಿ ಹುಲ್ತಿಕೊಪ್ಪ, ಎಂ.ಡಿ ಶೇಖರ್‌, ಶಿವಕುಮಾರ್‌ ತತ್ತೂರು, ಮಂಜುನಾಥ ಕುಣೆತೆಪ್ಪ, ವಿ.ಬಿ ಮುಖೇಶ್‌, ಮಂಜಪ್ಪ ಹಂಚಿ, ಮಲ್ಲ್‌ಕಪ್ಪ, ಚಂದ್ರಶೇಖರ್‌ ಸ್ವಾಮಿ, ರಾಜು ಮೂಲೇರ್‌, ಯೋಗೇಶ್‌, ಪರಮೇಶಿ, ದಿವಾಕರ, ಹನುಮನಗೌಡ, ಟಿ ನಾಗಪ್ಪ, ಮಂಜಪ್ಪ, ಎಂ ಮಾರುತಿ, ಪ್ರಭು, ವಿಜೇಂದ್ರ ಸ್ವಾಮಿ, ಭಾರಂಗಿ ಸೋಮಣ್ಣ, ಯೋಗೇಂದ್ರ ಗೌಡ ಇದ್ದರು.