ಸಾರಾಂಶ
ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಇರಿಸಿ ಹೋದ ಘಟನೆ ನ.೧೬ರಂದು ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವ್ರೋ ಸಹಿತ ಮೂವರು ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ಕನ್ನಡಪ್ರಭ ವಾರ್ತೆ ಪುತ್ತೂರು
ನಗರದ ಹೊರವಲಯದ ಸಾಲ್ಮರ ಕೆರೆಮೂಲೆ ಎಂಬಲ್ಲಿ ಕೂಲಿ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಹೆನ್ರಿ ತಾವ್ರೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಇರಿಸಿ ಹೋದ ಘಟನೆ ನ.೧೬ರಂದು ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವ್ರೋ ಸಹಿತ ಮೂವರು ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಓರ್ವ ಆರೋಪಿಯನ್ನು ಈ ಹಿಂದೆಯೇ ಬಂಧಿಸಿದ್ದರು. ಸೋಮವಾರ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಸ್ಪ್ಯಾನಿ ಮೇಸ್ತ್ರಿ ಎಂಬವರನ್ನು ಆರಂಭದಲ್ಲಿ ಬಂಧಿಸಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಹೆನ್ರಿ ತಾವ್ರೋ ಅವರ ಪುತ್ರನ ವಿರುದ್ಧವೂ ಆದಿ ದ್ರಾವಿಡ ಸಂಘಟನೆ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹೆನ್ರಿ ತಾವ್ರೋ, ಅವರ ಪುತ್ರ ಕಿರಣ್ ಮತ್ತು ಸಹಾಯಕ ಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಹೆನ್ರಿ ತಾವ್ರೋ ಅವರ ಬಂಧನಕ್ಕೆ ಆಗ್ರಹಿಸಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನ.೨೨ರಂದು ಪ್ರತಿಭಟನೆ ನಡೆದಿತ್ತು.