ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕಳೆದ ಫೆ. 20 ರಂದು ರಾಸಾಯನಿಕ ದ್ರಾವಣ ಸ್ಫೋಟಗೊಂಡು ಹಲವು ಕಾರ್ಮಿಕರು ಗಾಯಗೊಂಡಿದ್ದ ದುರ್ಘಟನೆಗೆ ಸಂಬಂಧಿಸಿ ಕಾರ್ಖಾನೆ ಮಾಲೀಕ ಸೇರಿ ಆರು ಮಂದಿ ವಿರುದ್ಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ನ ಮಾಲೀಕ, ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕ ರಮೇಶ್ ಬಂಡಿ, ಹಿರಿಯ ವ್ಯವಸ್ಥಾಪಕ ವಿಶ್ವನಾಥ್, ಪ್ರಿಂಟಿಂಗ್ ವಿಭಾಗದ ಮೇಲ್ವಿಚಾರಕ ಚಿಟ್ಟಿಬಾಬು, ಸೇಫ್ಟಿ ಆಫೀಸರ್ ಪೃಥ್ವಿ ಹಾಗೂ ಮೇಲ್ವಿಚಾರಕ ನಂದೀಶ್ ಎಂಬುವರ ವಿರುದ್ಧ ಗಾಯಾಳು ಸಹೋದರ ಗೌರೀಶ್ ನೀಡಿದ ದೂರಿನ ಅನ್ವಯ ಪೊಲೀಸರು ಬಿಎನ್ಎಸ್ 2023 ಕಾಯ್ದೆ 125, ಎ, ಹಾಗೂ 287ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಜೆಎಂಎಫ್ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀವ್ರವಾಗಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ಗಾರ್ಮೆಂಟ್ಸ್ ಕಾರ್ಮಿಕ ಶಿವಕುಮಾರ್ ಸಹೋದರ ಗೌರೀಶ್ ನೊಂದಿಗೆ ಪೊಲೀಸರು ಗುರುವಾರ ಸಂಜೆ ಶಾಹಿ ಗಾರ್ಮೆಂಟ್ಸ್ ನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.ಅಲ್ಲದೆ ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎ. ಎಚ್. ಜಯರಾಮ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶಿವಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರಲ್ಲದೆ ಕಾನೂನು ಹೋರಾಟದ ಮೂಲಕ ನಿಮಗೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಕಳೆದ ಗುರುವಾರ ಮಧ್ಯಾಹ್ನ ಸಿದ್ಧ ಉಡುಪುಗಳ ಮೇಲಿನ ಕಲೆ ತೆಗೆಯುವ ದ್ರಾವಣದ ಬಾಟೆಲ್ ಸ್ಫೋಟಿಸಿ ಪ್ರಿಂಟಿಂಗ್ ಹೆಲ್ಪರ್ ಶಿವಕುಮಾರ್, ಪ್ರಿಂಟಿಂಗ್ ಆಪರೇಟರ್ ಪ್ರಸನ್ನ, ವೆಲ್ಡರ್ ಅವಿನಾಶ್ ಗಾಯಗೊಂಡಿದ್ದರು.ಈ ಪೈಕಿ ಶಿವಕುಮಾರ್ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಸನ್ನ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಅವಿನಾಶ್ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಶಾಹಿ ಗಾರ್ಮೆಂಟ್ಸ್ ನಲ್ಲಿ ಪದೇ ಪದೇ ಇಂತಹ ಅವಘಡಗಳು ಸಂಭವಿಸುತ್ತಿದ್ದರೂ ಸಹ ಆಡಳಿತ ಮಂಡಳಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ಸ್ ವರ್ಕರ್ ಯೂನಿಯನ್ ಗಂಭೀರ ಆರೋಪ ಮಾಡಿತ್ತು.