ಮಂಗಳೂರಿನಲ್ಲಿ ‘ಕಾಜು ಶತಮಾನೋತ್ಸವ ಸಮ್ಮೇಳನ’ ಸಮಾರೋಪ

| Published : Nov 18 2025, 02:00 AM IST

ಮಂಗಳೂರಿನಲ್ಲಿ ‘ಕಾಜು ಶತಮಾನೋತ್ಸವ ಸಮ್ಮೇಳನ’ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಗೋಡಂಬಿ ಕಾರ್ಖಾನೆ ಸ್ಥಾಪನೆಯಾದ ಶತಮಾನೋತ್ಸವದ ಸ್ಮರಣಾರ್ಥ ಕರ್ನಾಟಕ ಗೋಡಂಬಿ ತಯಾರಕರ ಸಂಘದ ವತಿಯಿಂದ ನಗರದ ಡಾ.ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ‘ಕಾಜು ಶತಮಾನೋತ್ಸವ ಸಮ್ಮೇಳನ’ ಸಂಪನ್ನಗೊಂಡಿತು.

ಮಂಗಳೂರು: ಗೇರು ಬೆಳೆ ಕರಾವಳಿಯ ಆರ್ಥಿಕತೆಗೆ ಶಕ್ತಿ ತುಂಬಿದೆ. ಗೇರು ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಲಾಭದಾಯಕವಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲು ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.ಮಂಗಳೂರಿನಲ್ಲಿ ಗೋಡಂಬಿ ಕಾರ್ಖಾನೆ ಸ್ಥಾಪನೆಯಾದ ಶತಮಾನೋತ್ಸವದ ಸ್ಮರಣಾರ್ಥ ಕರ್ನಾಟಕ ಗೋಡಂಬಿ ತಯಾರಕರ ಸಂಘದ ವತಿಯಿಂದ ನಗರದ ಡಾ.ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾದ ‘ಕಾಜು ಶತಮಾನೋತ್ಸವ ಸಮ್ಮೇಳನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕರಾವಳಿಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕೃಷಿಕರು ಗೇರು ಕೃಷಿ ಮಾಡುತ್ತಿದ್ದಾರೆ. ಸಹಸ್ರಾರು ಮಂದಿಯ ಜೀವನೋಪಾಯ ಇದರಲ್ಲಿ ಅಡಗಿದೆ. ಪ್ರಸ್ತುತ ಗೋಡಂಬಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೇರು ಬೆಳೆ ಹೆಚ್ಚಿಸಲು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ರಾಜ್ಯದಲ್ಲಿ ಗೇರುಬೀಜ ಲಭ್ಯವಿಲ್ಲ. ಹಾಗಾಗಿ ಗೇರು ಅಭಿವೃದ್ಧಿ ನಿಗಮದ ಮೂಲಕ ರಾಜ್ಯದೆಲ್ಲೆಡೆ ಗೇರು ಗಿಡಗಳನ್ನು ಬೆಳೆಸಲು ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮಂಗಳೂರು ಟೈಲ್ಸ್, ಬೀಡಿ ಉದ್ಯಮದಂತೆ ಗೋಡಂಬಿ ಉದ್ಯಮವೂ ಅವನತಿಯತ್ತ ಸಾಗುವ ಅಪಾಯವಿದೆ ಎಂದು ಹೇಳಿದರು.ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಗೇರು ಉದ್ಯಮವು ಜನರ ಬದುಕು ಕಟ್ಟಲು ವೇದಿಕೆಯಾಗಿದೆ. ರಾಜ್ಯ, ಕೇಂದ್ರ ಸರ್ಕಾರ ಗೇರು ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡಬೇಕಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮಾತನಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಪೇಜಾವರ ಮಠದ ಪ್ರತಿನಿಧಿ ವಾಸುದೇವ ಭಟ್, ಕಾಜು ಶತಮಾನೋತ್ಸವ ಸಮ್ಮೇಳನ ಸಮಿತಿ ಸಂಚಾಲಕ ಕಲ್ಬಾವಿ ಪ್ರಕಾಶ್‌ ರಾವ್‌, ಅಮಿತ್ ಪೈ, ವೇಣುಗೋಪಾಲ್ ಮತ್ತಿತರರು ಇದ್ದರು.

ಕರ್ನಾಟಕ ಗೋಡಂಬಿ ತಯಾರಕರ ಸಂಘದ ಅಧ್ಯಕ್ಷ ಎ.ಕೆ. ರಾವ್‌ ಸ್ವಾಗತಿಸಿದರು. ಸುಬ್ರಾಯ ಪೈ ವಂದಿಸಿದರು. ಶರ್ಮಿಳಾ ಅಮಿನ್ ನಿರೂಪಿಸಿದರು.