ಸಾರಾಂಶ
ಬಿಹಾರ ವಿಧಾನಸಭಾ ಚುನಾವಣೆಗಾಗಿ ಜಾತಿಗಣತಿ ಮಾಡುತ್ತಿದ್ದಾರೆ. ಬಿಹಾರದ ಚುನಾವಣೆ ಹಾಗೂ ಕಾಂಗ್ರೆಸ್ ಪಕ್ಷದ ಒತ್ತಾಯದಿಂದ ಜಾತಿ ಗಣತಿ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
2014ರಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವನ್ನು ಜಾತಿಗಣತಿ ಮಾಡಬೇಕೆಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರರು ಒತ್ತಾಯ ಮಾಡಿಕೊಂಡು ಬಂದಿದ್ದಾರೆ. ಆದರೆ ಕೇಂದ್ರ ಸರ್ಕಾರ ಈಗ ಜಾತಿಗಣತಿ ಯಾಕೆ ಮಾಡುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಕೇಂದ್ರ ಸರ್ಕಾರದಿಂದ ಜಾತಿ ಗಣತಿ ಮಾಡುವುದಾಗಿ ಘೋಷಣೆ ವಿಚಾರದ ಕುರಿತು ಮಾತನಾಡಿದ ಅವರು, ಬಿಹಾರ ವಿಧಾನಸಭಾ ಚುನಾವಣೆಗಾಗಿ ಜಾತಿಗಣತಿ ಮಾಡುತ್ತಿದ್ದಾರೆ. ಬಿಹಾರದ ಚುನಾವಣೆ ಹಾಗೂ ಕಾಂಗ್ರೆಸ್ ಪಕ್ಷದ ಒತ್ತಾಯದಿಂದ ಜಾತಿ ಗಣತಿ ಮಾಡುತ್ತಿದ್ದಾರೆ. ಇವರು ಪ್ರೀತಿಯಿಂದ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇಷ್ಟು ದಿನ ಮಲಗಿದ್ದವರು ಬಿಹಾರದ ಚುನಾವಣೆಗಾಗಿ ಮಾಡುತ್ತಿದ್ದಾರೆ. ಕೇಂದ್ರ ಜಾತಿಗಣತಿ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ಜಾತಿಗಣತಿ ತ್ವರಿತವಾಗಿ ಆರು ತಿಂಗಳಲ್ಲಿಯೇ ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಒತ್ತಾಯಿಸಿದರು.ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣದ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲಿದೆ. ಯಾವ ರೀತಿ, ಯಾವ ಕಾರಣಕ್ಕೆ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ. ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ ಎಂದರು.
ಕಾಂಗ್ರೆಸ್ ಸರಕಾರದಲ್ಲಿ ಹಿಂದೂಗಳ ಹತ್ಯೆ ಎಂದು ಕಲ್ಲಡ್ಕ ಪ್ರಭಾಕರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಏನು ಇಲ್ಲ, ನಾವು ಹಿಂದೂಗಳ ರಕ್ಷಣೆ ಮಾಡ್ತೆವೆ. ಮುಸ್ಲಿಂರ ರಕ್ಷಣೆ ಕೂಡ ಮಾಡ್ತೆವೆ. ನಮ್ಮದು ಬಸವ ತತ್ವದ ಸರಕಾರ. ತನಿಖೆ ಆಗಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಲಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.ಪ್ರಕರಣ ಎನ್ಐಎಗೆ ಕೊಡುವ ವಿಚಾರದ ಕುರಿತು ಮಾತನಾಡಿದ ಅವರು, ಸುಮ್ಮ ಸುಮ್ಮನೆ ಮಾತು ಮಾತಿಗೆ ಎನ್ಐಎ ಅಂತಾರೆ. ಎನ್ಐಎ ಅಂದ್ರೆ ಏನು?. ಅವರೆಲ್ಲ ಟೆರರಿಸ್ಟ್ ಸೇರಿದಂತೆ ಅಂತಹ ಕಠಿಣ ಪ್ರಕರಣ ಬೇಧಿಸಲು ಎನ್ಐಎ ಬೇಕು. ಎನ್ಐಎ ಬಗ್ಗೆ ಗೊತ್ತಿರದೆ ಇರುವವರು ಈ ರೀತಿ ಮಾತನಾಡುತ್ತಾರೆ. ರಾಜ್ಯ ಇವತ್ತು ಪಾರದರ್ಶಕವಾಗಿ ತನಿಖೆ ಮಾಡುತ್ತಿದೆ. ಇವರು ಹಿಂದೆ ತಮ್ಮ ಸರಕಾರ ಇದ್ದಾಗ ಕೂಡ ಇದೆ ಪೊಲೀಸರು ಇದ್ದರು. ಈಗಲು ಅವರೇ ಇದ್ದಾರೆ ತಾನೇ, ಅವರೆಲ್ಲ ಸೂಕ್ತ ತನಿಖೆ ಮಾಡ್ತಾರೆ ಎಂದರು.
ಯತ್ನಾಳ್ ಟಾಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಮ್ಮದ್ ಪೈಗಂಬರ್ ಬಗ್ಗೆ ಯತ್ನಾಳ ಮಾತನಾಡಿದ್ದು ದೊಡ್ಡ ತಪ್ಪು. ಒಂದು ಧರ್ಮಗುರು ಬಗ್ಗೆ ಮಾತನಾಡಬಾರದು ಎಂದರು. ಅಲ್ಲದೇ ಅಲ್ಪಸಂಖ್ಯಾತರಿಂದ ಯತ್ನಾಳ ವಿರುದ್ಧ ಪ್ರತಿಭಟನೆ ವಿಚಾರವಾಗಿ ಶಾಸಕ ಯತ್ನಾಳ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದು ತಪ್ಪು. ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ವಕೀಲ ಖಾದ್ರಿ ವೈಯಕ್ತಿಕವಾಗಿ ಮಾತನಾಡಬಾರದಿತ್ತು. ಅದನ್ನು ನಾನು ಡಿಫೆಂಡ್ ಮಾಡಲ್ಲ. ಅಪ್ಪನ ಬಗ್ಗೆ ಮಾತನಾಡಬಾರದು. ತಂದೆಯ ಬಗ್ಗೆ ಯಾರು ಮಾತನಾಡಬಾರದು. ಪಕ್ಷ ಉಚ್ಚಾಟನೆ ಮಾಡಿದ್ರೂ ಶಾಸಕ ಯತ್ನಾಳಗೆ ಬುದ್ಧಿ ಬಂದಿಲ್ಲ. ಎಲುಬು ಇಲ್ಲದೇ ನಾಲಿಗೆ ಅಂತಾ ಏನುಬೇಕಾದ್ರೂ ಹೊಡೆಯುದಾ?. ಪಾಕಿಸ್ತಾನ, ಉಗ್ರರರಿಗೆ ಯತ್ನಾಳ ಬೈಕಿದ್ರೇ ಬೈಯಲಿ, ಆದ್ರೇ, ವೈಯಕ್ತಿಕವಾಗಿ ಟೀಕೆ ಬೇಡ. ಅಭಿವೃದ್ಧಿ ಹಾಗೂ ಬೆಲೆ ಏರಿಕೆ ಬಗ್ಗೆ ಟೀಕೆ ಮಾಡಲಿ ಎಂದು ಎಂ.ಬಿ.ಪಾಟೀಲ ಹೇಳಿದರು.