ಧಾರವಾಡ:
ದೇಶವನ್ನು ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬೆರೆಡು ಸಮಸ್ಯೆಗಳು ತೀವ್ರವಾಗಿ ಬಾಧಿಸುತ್ತಿವೆ. ಬಸವಣ್ಣನವರ ಕಾಲದ ಶರಣರು ಮಾಡುತ್ತಿದ್ದ ಕಾಯಕಗಳು ಜಾತಿಗಳಾಗಿ ರೂಪಾಂತರ ಹೊಂದಿ ಇಂದು ಜಾತೀಯತೆಯು ಹೆಚ್ಚಾಗಿದೆ. ಅದರಂತೆ ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳಿಂದ ತೀವ್ರ ಭ್ರಷ್ಟಾಚಾರ ಉಂಟಾಗಿ ಇಡೀ ದೇಶ ನಲುಗುತ್ತಿದೆ ಎಂದು ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ಹೇಳಿದರು.ಗಣಕರಂಗ, ವಚನಸಾಹಿತ್ಯ ಮಂದಾರ ಫೌಂಡೇಶನ್ ಮತ್ತು ಕಲ್ಪತರು ಮಹಿಳಾ ಸಂಘ ಜಂಟಿಯಾಗಿ ಬುದ್ಧ, ಬಸವಣ್ಣ, ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಆಯೋಜಿಸಿದ್ದ ಕವನ ಮತ್ತು ಲೇಖನ ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಎಲ್ಲಿಯ ವರೆಗೆ ಸಮಾಜದಲ್ಲಿ ಅಸಮಾನತೆ ಹೋಗುವುದಿಲ್ಲವೋ ಅಲ್ಲಿಯ ವರೆಗೆ ಈ ಜಾತೀಯತೆಯು ಸಾಮಾನ್ಯರನ್ನು ತೀವ್ರ ತೊಂದರೆಯುಂಟು ಮಾಡುತ್ತದೆ. ಅದರಂತೆ ಎಲ್ಲಿಯ ವರೆಗೆ ಮಾರಿಕೊಂಡ ಮತದಾರ ಮತ್ತು ಅಂಥವರಿಂದ ಆಯ್ಕೆಯಾಗುವ ರಾಜಕಾರಣಿಗಳ ಸಂತತಿ ನಾಶವಾಗುವುದಿಲ್ಲವೋ ಅಲ್ಲಿಯ ವರೆಗೆ ಭ್ರಷ್ಟಾಚಾರ ಈ ದೇಶದಿಂದ ಹೋಗುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ, ಬುದ್ಧ, ಬಸವ, ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರಂಥ ಮಹಾತ್ಮರು ಕಂಡ ಕನಸಿನ ಸಮತೆಯ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಪ್ರಯತ್ನಿಸೋಣ. ಸಮಾಜದ ಅನಿಷ್ಠ ಆಚರಣೆ, ಮೂಢನಂಬಿಕೆ, ಸುಶಿಕ್ಷಿತರಾದರೂ ಅಜ್ಞಾನದಿಂದ ಬಳಲುವ ಅನೇಕರನ್ನು ವಾಸ್ತವ ವಿಚಾರಗಳ ಮೂಲಕ ಸರಿದಾರಿಗೆ ತರೋಣ ಎಂದು ಕರೆ ನೀಡಿದರು.ಕವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ, ಶರಣತತ್ವ ಚಿಂತಕಿ ಡಾ. ಪುಷ್ಪಾವತಿ ಶಲವಡಿಮಠ, ಸಾಹಿತಿ ವೈ.ಜಿ. ಭಗವತಿ, ಡಾ. ವಿಜಯಕುಮಾರ ಕಮ್ಮಾರ, ಡಾ. ಪ್ರಭಾಕರ ಕಾಂಬಳೆ, ಸಿದ್ಧರಾಮ ಹಿಪ್ಪರಗಿ, ಗಣಪತಿ ಚಲವಾದಿ ಇದ್ದರು. ಸುಧಾ ಕಬ್ಬೂರ ನಿರೂಪಿಸಿದರು. ಸವಿತಾ ಕುಸುಗಲ್ಲ ಸ್ವಾಗತಿಸಿದರು.