ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗೆ ತುಂಬಾ ಪ್ರಾಮುಖ್ಯತೆ ಮತ್ತು ಕಡಿಮೆ ಹಣವನ್ನು ವೆಚ್ಚ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.

ನಗರದ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯು ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ ಶಾಖಾ ಸಂಶೋಧನೆಯಲ್ಲಿ ಸಂಶೋಧನಾ ಸಾಮರ್ಥ್ಯ ವೃದ್ಧಿ ಹಾಗೂ ಯೋಜನಾ ಪ್ರಸ್ತಾವನೆ ತಯಾರಿಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗೆ ತುಂಬಾ ಪ್ರಾಮುಖ್ಯತೆ ಮತ್ತು ಕಡಿಮೆ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಆದರೆ, ದೇಶದಲ್ಲಿ ಅಪಾರ ಸಂಖ್ಯೆಗಳಲ್ಲಿ ಪ್ರತಿಭಾವಂತ ಯುವ ವಿಜ್ಞಾನಿಗಳಿದ್ದು, ತಮ್ಮ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಶಕ್ತಿ ಹೊಂದಿದ್ದಾರೆ. ಭಾರತವು ಜಗತ್ತಿನ ಶೇ.60 ರಷ್ಟು ಲಸಿಕೆ ಪೂರೈಕೆಯನ್ನು ಮಾಡುತ್ತಿರುವುದು ನಮ್ಮ ವೈಜ್ಞಾನಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಶಿಕ್ಷಣ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವ ಕಾರ್ಯಾಗಾರ ಶ್ಲಾಘನೀಯವಾಗಿದೆ. ಈ ರೀತಿಯ ವೇದಿಕೆಗಳನ್ನು ಕಲ್ಪಿಸುವ ಮೂಲಕ ವಿಜ್ಞಾನ ಹಾಗೂ ಸಂಶೋಧನೆಯನ್ನು ಜೀವನದ ಭಾಗವಾಗಿಸಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ಮಾತನಾಡಿ, ಸಂಶೋಧನೆ ಎನ್ನುವುದು ಜೀವನ ಪರಿವರ್ತನೆಯ ಸಾಧನವಾಗಿದ್ದು, ಅದರ ಪ್ರಯೋಜನವನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಯುವ ಮನಸ್ಸುಗಳಲ್ಲಿ ಸಂಶೋಧನಾ ಚಿಂತನೆಯನ್ನು ಬೆಳೆಸುವುದು ಹಾಗೂ ನಿಷ್ಠೆ ಮತ್ತು ಶ್ರಮದೊಂದಿಗೆ ಕೆಲಸ ಮಾಡಲು ಪ್ರೇರೇಪಿಸುವುದು ವಿದ್ಯಾಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಜಿ.ಬಿ. ಪಂತ್, ರಾಷ್ಟ್ರೀಯ ಹಿಮಾಲಯ ಪರಿಸರ ಸಂಸ್ಥೆಯ ಪ್ರೊ. ಸುನಿಲ್ ನೌಟಿಯಾಲ್ ಹಾಗೂ ಸಿ.ಎಫ್‌.ಟಿ.ಆರ್‌.ಐ ಮುಖ್ಯ ವಿಜ್ಞಾನಿ ಡಾ. ಪ್ರಕಾಶ್ ಎಲ್. ಹಲಾಮಿ ಅವರು ಅಂತರ ಶಾಖಾ ಸಂಶೋಧನೆ ಮತ್ತು ಪರಿಣಾಮಕಾರಿಯಾದ ಯೋಜನಾ ಪ್ರಸ್ತಾವನೆ ತಯಾರಿ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.

ಸಂಸ್ಥೆಯ ಡೀನ್ ಪ್ರೊ.ಎಸ್. ಶ್ರೀಕಂಠಸ್ವಾಮಿ, ಕಾವೇರಿ ಹೃದಯ ಹಾಗೂ ಬಹು ವಿಶೇಷ ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸಕ ಡಾ.ಆರ್.ಎಂ. ಅರವಿಂದ್ ಮೊದಲಾದವರು ಇದ್ದರು.