ಸಾರಾಂಶ
ಬೆಂಗಳೂರು : ನಗರದ ಕೆ.ಆರ್.ಸರ್ಕಲ್ ಬಳಿಯ ನೃಪತುಂಗ ರಸ್ತೆಯಲ್ಲಿ ‘ಸೇಪಿಯನ್ಸ್ ಇಂಡಿಯಾ ಸಂಸ್ಥೆ’ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಅಡಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣವನ್ನು ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿ ಬಿಬಿಎಂಪಿಗೆ ಹಸ್ತಾಂತರಿಸಿದರು.
ಶಿಲ್ಪಾ ಫೌಂಡೇಶನ್, ಸೇಪಿಯನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನೃಪತುಂಗ ರಸ್ತೆ, ಫೋರಂ ಮಾಲ್ ಹಾಗೂ ಕಾಡಬೀಸನಹಳ್ಳಿ ರಿಂಗ್ ರಸ್ತೆ ಸೇರಿದಂತೆ ಒಟ್ಟು ಮೂರು ಸ್ಮಾರ್ಟ್ ಬಸ್ ನಿಲ್ದಾಣವನ್ನು ನಿರ್ಮಿಸಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಸಾಂಕೇತಿಕವಾಗಿ ನೃಪತುಂಗ ರಸ್ತೆಯ ಸ್ಮಾರ್ಟ್ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಸ್ಮಾರ್ಟ್ ನಿಲ್ದಾಣ ಹಲವು ವೈಶಿಷ್ಟತೆಗಳಿಂದ ಕೂಡಿದೆ. ಇತರ ಬಸ್ ನಿಲ್ದಾಣಗಳಿಗಿಂತ ವಿಭಿನ್ನವಾಗಿದ್ದು ಮಹಿಳೆಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಿದೆ. ನಿಲ್ದಾಣದಲ್ಲಿ ಅಳವಡಿಕೆ ಮಾಡಿರುವ ಪ್ಯಾನಿಕ್ ಬಟನ್ ಹಾಗೂ ಸಿಸಿ ಕ್ಯಾಮೆರಾಗಳು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ವೇಳೆ ಸೇಪಿಯನ್ಸ್ ಸಂಸ್ಥೆಯ ಸುರಜೀತ್ ಬಸು, ರಾಜೇಶ್ ಕೆಂಕೆರೆ, ಸುಶೀಲ್ ಮಹಲ, ಗಿರೀಶ್ ಕುಮಾರ್, ಶಿಲ್ಪಾ ಫೌಂಡೇಶನ್ ಸಂಸ್ಥಾಪಕ ಅಚ್ಚುತ್ ಗೌಡ ಉಪಸ್ಥಿತರಿದ್ದರು.
ಮಹಿಳೆಯರ ಸುರಕ್ಷತೆಗೆ ಆದ್ಯತೆ: ದಿನದ 24 ಗಂಟೆ ಸಿಸಿ ಕ್ಯಾಮೆರಾಗಳು ಕಾರ್ಯಾಚರಿಸಲಿವೆ. ಈ ಕ್ಯಾಮೆರಾಗಳು ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರಲಿದ್ದು, ಸ್ಥಳೀಯ ಠಾಣಾ ಪೊಲೀಸರ ನಿರೀಕ್ಷಣೆಯಲ್ಲಿರಲಿದೆ.
ಬಸ್ ನಿಲ್ದಾಣದಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಸಾರ್ವಜನಿಕರಿಗೆ ಹಾಗೂ ಮಹಿಳಾ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯದ ಸನ್ನಿವೇಶದಲ್ಲಿ ಪ್ಯಾನಿಕ್ ಬಟನ್ ಒತ್ತಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ತಲುಪಲಿದೆ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಅಪಾಯಕ್ಕೆ ಒಳಗಾದವರ ರಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ಸೌಲಭ್ಯದಿಂದ ಮಹಿಳೆಯರಿಗೆ 24/7 ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ಯಾಡ್ಗಳನ್ನು ಪಡೆಯಬಹುದಾಗಿದೆ.
ಮೊಬೈಲ್ ಹಾಗೂ ಲ್ಯಾಪ್ಟಾಪ್ ಚಾರ್ಜಿಂಗ್ ಮಾಡಲು ಚಾರ್ಜಿಂಗ್ ಪಾಯಿಂಟ್, ಸೆನ್ಸರ್ ಬೇಸ್ಡ್ ಡಸ್ಟ್ ಬಿನ್, ಬಿಎಂಟಿಸಿ ಬಸ್ಸುಗಳ ವೇಳಾ ಪಟ್ಟಿಯ ಡಿಸ್ಪ್ಲೇ, ಮಳೆ ನೀರು ಕೋಯ್ಲು ವ್ಯವಸ್ಥೆ ಸೇರಿದಂತೆ ಮೊದಲಾದ ಸೌಲಭ್ಯ ಮಾಡಲಾಗಿದೆ.