ಸಾರಾಂಶ
ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸಮತಟ್ಟು ಮಾಡದೇ ಕಾಂಕ್ರೀಟ್ ಹಾಕಿದ್ದಾರೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ
ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಸಿಸಿ ರಸ್ತೆಯು ಕೇವಲ ಎರಡೇ ತಿಂಗಳಲ್ಲಿ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ನರೇಗಾ ಯೋಜನೆಯಡಿಯಲ್ಲಿ ಅಂದಾಜು ₹4 ಲಕ್ಷ ಮೊತ್ತದಲ್ಲಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿಯ ಮಾಡುವ ಸಂದರ್ಭದಲ್ಲಿ ಸಿಮೆಂಟ್, ಮರಳು, ಖಡಿ ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡದೆ ಇರುವುದರಿಂದ ಕಾಮಗಾರಿ ಕಳಪೆಯಾಗಿದೆ ಎಂದು ಇಲ್ಲಿಯ ಜನರು ಆರೋಪಿಸಿದ್ದಾರೆ.
ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸಮತಟ್ಟು ಮಾಡದೇ ಕಾಂಕ್ರೀಟ್ ಹಾಕಿದ್ದಾರೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅಲ್ಲಲ್ಲಿ ನೀರು ನಿಲ್ಲುತ್ತದೆ. ರಸ್ತೆ ಮಧ್ಯೆ ನಿರ್ಮಾಣ ಮಾಡಿದ ಚರಂಡಿಯ ಅಗಲವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗಿದ್ದಾರೆ. ಈ ರಸ್ತೆಯ ಕೊನೆಗೆ ಚರಂಡಿ ಅಗಲ ತೀರಾ ಕಡಿಮೆಯಾಗಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕೆಲ ಮನೆಗಳ ಮುಂದೆ ಚರಂಡಿ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ಸಾಧ್ಯತೆ ಇದೆ. ಮನೆಯ ಮುಂದೆ ನೀರು ನಿಲ್ಲವುದರಿಂದ ಗಬ್ಬು ವಾಸನೆ ಬರುತ್ತಿದೆ. ವಾಸಿಸುವುದು ಕಷ್ಟದಾಯಕವಾಗಿದೆ ಎನ್ನುತ್ತಾರೆ.ಈ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ, ಮೇಲುಸ್ತುವಾರಿ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಕೊಂಡು, ಕೂಡಲೇ ಈ ಸಿಸಿ ರಸ್ತೆ ಸಮತಟ್ಟು ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮರು ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಮ್ಮ ಮನೆ ಮುಂದೆ ಕಾಂಕ್ರೀಟ್ ಹಾಕಿ ಸುಮಾರು ಎರಡು ತಿಂಗಳಾಗಿರಬಹುದು, ಈಗಲೇ ಎರಡು ಮೂರು ಕಡೆ ಬಿರುಕು ಬಿಟ್ಟಿದೆ. ನೀರು ಹರಿಯಲು ರಸ್ತೆಯಲ್ಲಿ ಸಮರ್ಪಕವಾದ ವ್ಯವಸ್ಥೆಯಿಲ್ಲ, ಕಿರಿದಾದ ಚರಂಡಿ ಮಾಡಿದ್ದು, ಇದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ತಗ್ಗು ಇದ್ದಲ್ಲಿ ನಿಂತು ಗಬ್ಬು ವಾಸನೆ ಬೀರುತ್ತದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರೋಗ ಹರಡುವ ಸಾಧ್ಯತೆ ಇದ್ದು ಸೂಕ್ತ ಕ್ರಮವಾಗಬೇಕು ಎಂದು ಮಾಲಗಿತ್ತಿ ನಿವಾಸಿ ಶಿವನಪ್ಪ ಉಳ್ಳಾಗಡ್ಡಿ ಹೇಳಿದ್ದಾರೆ.ಮಾಲಗಿತ್ತಿ ಗ್ರಾಮದಲ್ಲಿ ನಿರ್ಮಿಸಲಾದ ಸಿಸಿ ರಸ್ತೆ ಕಾಮಗಾರಿಯ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ತಿಳಿಸಿದ್ದಾರೆ.