ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಸಿ.ಸಿ.ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಮುಂಜಾಗ್ರತಾ ಸುರಕ್ಷಿತಾ ಕ್ರಮ ಅಳವಡಿಸಿಕೊಳ್ಳಬೇಕೆಂದು ಬಸವನಬಾಗೇವಾಡಿ ಪೊಲೀಸ್ ಠಾಣೆ ಪಿಐ ಗುರುಶಾಂತ ದಾಶ್ಯಾಳ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಠಾಣಾ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕ್ಗಳಲ್ಲಿ ಹಗಲು-ರಾತ್ರಿ ಪಾಳಿಯಲ್ಲಿ ಆಯುಧ ಸಹಿತ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿಕೊಳ್ಳುವುದು. ಬ್ಯಾಂಕ್ ಎಟಿಎಂಗಳಲ್ಲಿ ಸೈರನ್ ಅಲಾರಾಂ ಅಳವಡಿಸುವುದು. ಬ್ಯಾಂಕ್ ಲಾಕರ್ಗಳ ಸುಕ್ಷರತಾ ಕ್ರಮಗಳನ್ನು ವ್ಯವಸ್ಥಾಪಕರು ಕೈಗೊಳ್ಳಬೇಕು. ಬ್ಯಾಂಕಿನಲ್ಲಿ ಯಾರಾದರೂ ಅನುಮಾನಸ್ಪಾದ ವ್ಯಕ್ತಿಗಳು ಓಡಾಟ ಮಾಡುವುದು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಬ್ಯಾಂಕಿನ ಸುರಕ್ಷತೆಗಾಗಿ ವ್ಯವಸ್ಥಾಪಕರು ತಮ್ಮ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡುವ ಮೂಲಕ ಬ್ಯಾಂಕ್ ಸುರಕ್ಷಿತವಾಗಿ ಇರುವಂತೆ ಮಾಡುವ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆಂದರು.ಎಲ್ಲ ಗ್ರಾಹಕರಿಗೆ ಸೈಬರ್ ವಂಚನೆಗಳ ಕುರಿತಾದ ಜಾಗೃತಿ ಮೂಡಿಸುವ ಫಲಕಗಳನ್ನು ಬ್ಯಾಂಕಿನಲ್ಲಿ ಅಳವಡಿಸಬೇಕು. ಬ್ಯಾಂಕಿನಲ್ಲಿ ಅನಗತ್ಯ ವ್ಯಕ್ತಿಗಳು ಬರದಂತೆ ಹಾಗೂ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುವಂತಹವರ ಬಗ್ಗೆ ಸೆಕ್ಯುರಿಟಿ ಗಾರ್ಡ್ಗಳು ಗಮನ ಹರಿಸುವಂತೆ ಸೂಚಿಸಬೇಕು. ಬ್ಯಾಂಕಿನಲ್ಲಿ ಯಾವುದೇ ನವೀಕರಣ, ರಿಪೇರಿ, ಯಾವುದೇ ಹೊಸ ಸಾಧನಗಳ ಅಳವಡಿಕೆ ಕಾಲಕ್ಕೆ ತಾತ್ಕಾಲಿಕವಾಗಿ ಬರುವ ಕೆಲಸಗಾರರ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಸೇರಿದಂತೆ ಅವರ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬೇಕು. ಜನಸಂದಣಿ ವಿರಳವಿರುವ ಸ್ಥಳದಲ್ಲಿರುವ ಎಟಿಎಂಗಳಿಗೆ ಕಡ್ಡಾಯವಾಗಿ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಕ ಮಾಡಿಕೊಳ್ಳಬೇಕು. ಸಂಬಂಧ ಪಟ್ಟ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಹಾಕಬೇಕೆಂದರು.
ಸಭೆಯಲ್ಲಿ ಎಸ್ಬಿಐ, ಕೆನರಾ, ಎಚ್ಡಿಎಫ್ಸಿ, ಡಿಸಿಸಿ, ಐಡಿಎಫ್ಸಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಬಸವೇಶ್ವರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕರು, ಹೂವಿನಹಿಪ್ಪರಗಿ ಕೆನರಾ ಬ್ಯಾಂಕ್, ಠಾಣೆಯ ವ್ಯಾಪ್ತಿಯಲ್ಲಿರುವ ವಿವಿಧ ಪಿಕೆಪಿಎಸ್ ಬ್ಯಾಂಕಿನ ಸಿಇಒಗಳು ಭಾಗವಹಿಸಿದ್ದರು.