ವ್ಯಸನ ಮುಕ್ತ ದಿನಾಚರಣೆ ಅಚ್ಚುಕಟ್ಟಾಗಿ ಆಚರಿಸಿ

| Published : Jul 26 2025, 01:30 AM IST

ಸಾರಾಂಶ

ಮಹಾಂತ ಶಿವಯೋಗಿಗಳು ಜನರ ದುಶ್ಚಟ ಬಿಡಿಸಲು ಜೋಳಿಗೆ ಹಿಡಿದು ಅದರಲ್ಲಿ ಕೆಟ್ಟ ಚಟಗಳನ್ನು ಹಾಕಿ ಎಂದು ಜನರಿಗೆ ಹೇಳುವ ಮೂಲಕ ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡಿ, ವ್ಯಸನ ಮುಕ್ತ ಆಂದೋಲನದ ಹರಿಕಾರರಾದರು.

ಕೊಪ್ಪಳ:

ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಆ. 1ರಂದು ಆಚರಿಸುವ ವ್ಯಸನ ಮುಕ್ತ ದಿನಾಚರಣೆಯನ್ನು ಜಿಲ್ಲಾ ಕೇಂದ್ರ ಮತ್ತು ತಾಲೂಕಿನಲ್ಲಿ ತಹಸೀಲ್ದಾರ್‌ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವ್ಯಸನಮುಕ್ತ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಂತ ಶಿವಯೋಗಿಗಳು ಜನರ ದುಶ್ಚಟ ಬಿಡಿಸಲು ಜೋಳಿಗೆ ಹಿಡಿದು ಅದರಲ್ಲಿ ಕೆಟ್ಟ ಚಟಗಳನ್ನು ಹಾಕಿ ಎಂದು ಜನರಿಗೆ ಹೇಳುವ ಮೂಲಕ ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡಿ, ವ್ಯಸನ ಮುಕ್ತ ಆಂದೋಲನದ ಹರಿಕಾರರಾದರು. ಇಂತಹ ಮಹನೀಯರ ಜಯಂತಿ ಕಾರ್ಯಕ್ರಮ ಎಲ್ಲರೂ ಸೇರಿ ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆಂದರು.

ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ನೋಡಿಕೊಳ್ಳಬೇಕು. ಮಹಾಂತ ಶಿವಯೋಗಿಗಳ ಕುರಿತು ಮಾತನಾಡುವ ಉಪನ್ಯಾಸಕರನ್ನು ಕರೆಸಿ ಅವರ ವಿಚಾರವನ್ನು ಯುವಪೀಳಿಗೆಗೆ ತಿಳಿಸಬೇಕು. ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಿಗೆ ತಿಳಿ ಹೇಳುವುದು ಇಂದು ಅವಶ್ಯವಾಗಿದೆ ಎಂದರು.

ಸಭೆಯಲ್ಲಿ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ, ಡಿಡಿಪಿಯು ಜಗದೀಶ, ಡಿಡಿಪಿಐ ಶ್ರೀಶೈಲ್ ಬಿರಾದಾರ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.