ಸಾರಾಂಶ
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಕೊಪ್ಪಳ:
ಜಿಲ್ಲೆಯಲ್ಲಿ ಜೂ. 7ರಂದು ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಬ್ಬದ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಜಿಲ್ಲೆಯಲ್ಲಿ ಕೋಮು ಗಲಭೆಗೆ ಅವಕಾಶ ನೀಡದೆ, ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ಪ್ರಾಣಿಬಲಿ, ಅವುಗಳ ಸಾಗಾಟದ ಮೇಲೆ ನಿಗಾ ವಹಿಸಲು ಜಿಲ್ಲೆಯಲ್ಲಿ 16 ಚೆಕ್ಪೋಸ್ಟ್ ತೆರೆಯಲಾಗುವುದು. ಸೋಶಿಯಲ್ ಮೀಡಿಯಾದಲ್ಲಿ ಬರುವ ಯಾವುದೇ ಸುಳ್ಳು ಸುದ್ದಿ ನಂಬದೆ, ಅಂಥವುಗಳನ್ನು ನಮ್ಮ ಗಮನಕ್ಕೆ ತರಬೇಕು. ಈಗಾಗಲೇ ರೌಡಿಶೀಟರ್ಗಳ ಪರೇಡ್ ಮಾಡಲಾಗಿದೆ. ಜೂ. 6, 7ರಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಭಾರದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಜಿಲ್ಲೆಯ ಪೊಲೀಸ್ ಠಾಣಾ ಹಂತಗಳಲ್ಲಿ ನಮ್ಮ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬಕ್ರೀದ್ ಹಬ್ಬ ಆಚರಿಸಬೇಕು ಎಂದರು.ಮುಸ್ಲಿಂ ಸಮಾಜದ ಮುಖಂಡರು ಮಾತನಾಡಿ, ಬೆಳಗ್ಗೆ 9ರಿಂದ 10 ಗಂಟೆಗೆ ನಮಾಜ್ ನಡೆಯಲಿದೆ. ಹಬ್ಬ ಶಾಂತಿಯುತವಾಗಿ ಆಚರಿಸುತ್ತೇವೆ. ಕೊಪ್ಪಳದ ಈದ್ಗಾ ಮೈದಾನದಲ್ಲಿ ಹಬ್ಬದ ದಿನ ಹೆಚ್ಚಿನ ಜನರು ಸೇರುವುದರಿಂದ ನಗರಸಭೆ ವತಿಯಿಂದ ಸ್ವಚ್ಛತೆ ಕಾರ್ಯವಾಗಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರೇಷ್ಮಾ ಹಾನಗಲ್, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಮುಸ್ಲಿಂ ಮುಖಂಡರಾದ ಪೀರಾ ಹುಸೇನ್ ಹೊಸಳ್ಳಿ, ಎಸ್.ಬಿ. ಖಾದ್ರಿ, ಸಯ್ಯದ್ ನಾಸಿರುದ್ದೀನ್ ಹುಸೇನಿ, ಮಾನ್ವಿ ಪಾಶಾ, ಆರ್. ಮಹಮ್ಮದ್ ರಫಿ, ಮಹಮ್ಮದ್ ಸಾಬ, ಫಕ್ರುದ್ದೀನ್, ಮರ್ದಾನ್ ಸಾಬ ಗುಡಗುಡಿ, ಮಹಮ್ಮದ್ ಸಾಬ ಕುರಗಲ್, ಬಿಜಿಲಿಸಾಬ ಪಟೇಲ್, ಉಮಾರ್ ಪಾರು ಉಪಸ್ಥಿತರಿದ್ದರು.