ಹೋಳಿ ಹಬ್ಬ ಸೌಹಾರ್ದತೆಯಿಂದ ಆಚರಿಸಿ: ಪೊಲೀಸ್‌ ಆಯುಕ್ತ ಚೇತನ್

| Published : Mar 22 2024, 01:08 AM IST

ಹೋಳಿ ಹಬ್ಬ ಸೌಹಾರ್ದತೆಯಿಂದ ಆಚರಿಸಿ: ಪೊಲೀಸ್‌ ಆಯುಕ್ತ ಚೇತನ್
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ನಿಮಿತ್ತ ಮಾ.25ರಂದು ಕಾಮದಹನ ಮತ್ತು ಮಾ.26ರಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ನಗರ ಪೊಲೀಸ್‌ ಆಯುಕ್ತ ಚೇತನ್ ಆರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ನಿಮಿತ್ತ ಮಾ.25ರಂದು ಕಾಮದಹನ ಮತ್ತು ಮಾ.26ರಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ನಗರ ಪೊಲೀಸ್‌ ಆಯುಕ್ತ ಚೇತನ್ ಆರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಲಬುರಗಿಯಲ್ಲಿ ಹೋಳಿ ಹಬ್ಬ ಆಚರಣೆ ಅಂಗವಾಗಿ ಕರೆಯಲಾದ ಶಾಂತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ, ಎಸ್ಎಸ್ಎಲ್‌ಸಿ ಪರೀಕ್ಷೆ ಹಾಗೂ ರಂಜಾನ್‌ ಹಬ್ಬ ಒಂದೇ ಸಮಯದಲ್ಲಿ ಬಂದಿರುವುದರಿಂದ ಬಣದ ಬಂಡಿ ಓಡಿಸುವಂತಹ ಸಾರ್ವಜನಿಕರು ಸಂಬಂಧಪಟ್ಟ ಎಆರ್‌ಓದಿಂದ ಪರವಾನಗಿ ಪಡೆದುಕೊಳ್ಳಬೇಕೆಂದರು. ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಧಾರ್ಮಿಕ ಮುಖಂಡರ ಸಭೆಯಲ್ಲಿ ಹೇಳಿದರು.

ಹೋಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮಾ.26ರಂದು ಮಧ್ಯಾಹ್ನ 12 ಗಂಟೆಯವರೆಗೆ ಬಣ್ಣದ ಆಟ ಆಡಬೇಕೆಂದರು. ಹಬ್ಬದ ದಿನಗಳಂದು ಸಾರ್ವಜನಿಕರು ಚರ್ಮಕ್ಕೆ ಹಾನಿಕಾರಕವಲ್ಲದ ನೈಸರ್ಗಿಕ ಬಣ್ಣ ಮಾತ್ರ ಉಪಯೋಗಿಸಬೇಕು. ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬಣ್ಣ ಹಚ್ಚದಂತೆ, ಹೆಣ್ಣುಮಕ್ಕಳ ಮೇಲೆ ಬಣ್ಣ ಹಾಕಕೂಡದು ಯಾರಿಗೂ ಒತ್ತಾಯವಾಗಿ ಹಚ್ಚದಂತೆ ಎಚ್ಚರಿಕೆ ವಹಿಸಬೇಕು. ಹಬ್ಬವನ್ನು ಸಂತೋಷದಿಂದ ಆಚರಿಸಬೇಕೇ ವಿನಃ ಯಾರಿಗೂ ತೊಂದರೆಯಾಗಬಾರದು.

ಜಿಲ್ಲೆಯಲ್ಲಿ 15 ಚೆಕ್‌ಪೋಸ್ಟ್‌ಗಳು ತೆರೆಯಲಾಗಿದೆ ಬೈಕ್‍ಗಳ ಸೈಲೆನ್ಸರ್ ತೆಗೆದು ಓಡಿಸುವವರ ವಿರುದ್ಧ ಸಹ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಶಾಂತಿಭಂಗ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ಯಾವುದೇ ಅಹಿತರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು.

ಎಲ್ಲ ಸಾರ್ವಜನಿಕರು ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಸೋಮವಾರ ಮತ್ತು ಮಂಗಳವಾರದಂದು ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಚರ್ಚಿಸಿ ವಿವಿಧ ಬಡಾವಣೆಗಳಿಗೆ ನೀರು ಪೂರೈಸುವ ಅವಧಿ ಪ್ರಚುರಪಡಿಸಬೇಕು ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ವೇದಿಕೆ ಮೇಲೆ ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಪಿ ಅಪರಾಧ ವಿಭಾಗದ ಪ್ರವೀಣ ನಾಯಕ್ ಇದ್ದರು. ಪೊಲೀಸ್‌ ಇನ್ಸ್‌ಪೆಕ್ಟರ್‌ ಸಮಿತಿ ಸದಸ್ಯರು ಹಾಗೂ ವಿವಿಧ ಧರ್ಮಗಳ ಮುಖಂಡರು, ಹಿರಿಯ ನಾಗರಿಕರು ಹಲವಾರು ಸೂಕ್ತ ಸಲಹೆಗಳನ್ನು ನೀಡಿದರು.