ಸಾರಾಂಶ
ಕುಕನೂರು: ಜಿಲ್ಲೆಯ ಕೆಲವು ಪ್ರದೇಶದಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ. ಅದರ ಬಗ್ಗೆ ಅರಿವು ಮೂಡಿಸುವ ಜತೆಗೆ ನಾಗರ ಪಂಚಮಿಯನ್ನು, ಬಸವ ಜಯಂತಿಯನ್ನಾಗಿ ಆಚರಣೆ ಮಾಡಬೇಕು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಹೇಳಿದರು.
ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಶುಕ್ರವಾರ ಜರುಗಿದ ತಾಲೂಕು ಸಂಚಾಲಕರ, ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ಪೃಶ್ಯತೆ ಹೋಗಿಲ್ಲ. ಕೆಲವರ ಮನಸ್ಥಿತಿಯಲ್ಲಿ ಆಳವಾಗಿ ಬೇರೂರಿ ಅಸ್ಪೃಶ್ಯತೆ ಕೆಲಸ ಮಾಡುತ್ತಿದೆ. ಇನ್ನು ಕೆಲವರು ನಮ್ಮನ್ನು ಜಾತಿ ಲೆಕ್ಕದಲ್ಲಿ ಅಳೆಯುತ್ತಾರೆ. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಕ್ಕೆ ನಮ್ಮ ಬೆವರಿಗೆ ಬೆಲೆ ಇಲ್ಲವಾಗಿದೆ. ಕೆಲವು ಭಾಗದಲ್ಲಿ ಗೌಡಕಿ ಪದ್ಧತಿ ಜೀವಂತವಿದೆ. ನಗರ, ಗ್ರಾಮೀಣ ಪ್ರದೇಶ ಜನರಿಗೆ ಅರಿವು ಮೂಡಿಸಲು ನಮ್ಮ ಸಂಘಟನೆ ನಿರಂತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಜನರು ಮೌಢ್ಯದಲ್ಲಿ ಇನ್ನು ಜೀವಂತರಾಗಿದ್ದಾರೆ. ಕಲ್ಲುನಾಗರ ಮೂರ್ತಿಗೆ, ಹುತ್ತಕ್ಕೆ ಹಾಲು ಹಾಕುವ ಬದಲು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ, ಹಾಲು ನೀಡಬೇಕು. ಇದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಮಾನವ ಬಂಧುತ್ವ ವೇದಿಕೆ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ವಿಚಾರವನ್ನು ಹೊಂದಿದವರು ಈ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು.ಎಸ್ಸಿ, ಎಸ್ಟಿ ಇತರ ಕೆಲವು ಸಮಾಜದಲ್ಲಿ ಮಕ್ಕಳು ಶಿಕ್ಷಣವಂಚಿತರಾಗುತ್ತಿದ್ದಾರೆ. ಅದರ ಬಗ್ಗೆ ಯೊಚನೆ ಮಾಡಿ ಅಂತಹ ಯುವಕರಿಗೆ ನಮ್ಮ ಬಂಧುತ್ವದಿಂದ ಸ್ವಯಂ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಗೊಂದು ಮಾನವ ಬಂಧುತ್ವ ವೇದಿಕೆ ಕೇಂದ್ರ ತೆರೆಯಬೇಕು ಎನ್ನುವ ಯೋಚನೆಯಲ್ಲಿದ್ದೇವೆ. ಜನರು ಮೌಢ್ಯದಿಂದ ಹೊರಬಂದು, ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಸಂಚಾಲಕ ಭೀಮಣ್ಣ ಹವಳಿ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.ಮಾನವ ಬಂಧುತ್ವ ವೇದಿಕೆ ಸಂಚಾಲಕ ಯಮನೂರಪ್ಪ ಗೊರ್ಲೆಕೊಪ್ಪ, ಮಹಿಳಾ ಸಂಚಾಲಕರಾದ ಸುಕನ್ಯಾ, ವಿಜಯಲಕ್ಷ್ಮೀ, ಮುಖಂಡರಾದ ವೆಂಕಟೇಶ ಎನ್. ಬಳ್ಳಾರಿ, ಹನುಮಂತಪ್ಪ ಮಂಡಲಗೇರಿ, ಹನುಮಂತಪ್ಪ ಭಾವಿಮನಿ, ಶಿವು ಅರಕೇರಿ, ಮುದಕಪ್ಪ ಗೊಲ್ಲರ್, ಅಕ್ಬರಸಾಬ್ ಬನ್ನಿಕೊಪ್ಪ, ಬೆಟ್ಟಪ್ಪ, ದೇವರಾಜ ನಡುವಿನಮನೆ, ಮಹೇಶ ಮುತ್ತಾಳ, ಯಲ್ಲಪ್ಪ ಕಂಪನಾಯ್ಕರ್, ಗಿರಿಯಪ್ಪ ಕಡೇಮನಿ, ಕರಿಯಪ್ಪ ಅಡವಿಹಳ್ಳಿ, ಸಿದ್ದಪ್ಪ ಗಾವರಾಳ, ಶಿವರಾಜ ಹಳ್ಳಿ, ಬಸವಂತಪ್ಪ ಇತರರು ಇದ್ದರು.