ಪಟ್ಟಣದಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ, ಸೌಹರ್ದಯುತವಾಗಿ ಜಿಲ್ಲೆಗೆ ಮಾದರಿಯಾಗುವಂತೆ ಆಚರಿಸುವುದರ ಜತೆಗೆ ಸಾರ್ವಜನಿಕರು ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಸಹಕಾರ ನೀಡುವ ಮೂಲಕ ಪ್ರತಿಯೊಬ್ಬರೂ ಈ ಹಬ್ಬವನ್ನು ಭಕ್ತಿಭಾವ ಹಾಗೂ ಮಾದರಿಯಾಗಿ ಆಚರಿಸಬೇಕು.
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಪಟ್ಟಣದಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ, ಸೌಹರ್ದಯುತವಾಗಿ ಜಿಲ್ಲೆಗೆ ಮಾದರಿಯಾಗುವಂತೆ ಆಚರಿಸುವುದರ ಜತೆಗೆ ಸಾರ್ವಜನಿಕರು ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಸಹಕಾರ ನೀಡುವ ಮೂಲಕ ಪ್ರತಿಯೊಬ್ಬರೂ ಈ ಹಬ್ಬವನ್ನು ಭಕ್ತಿಭಾವ ಹಾಗೂ ಮಾದರಿಯಾಗಿ ಆಚರಿಸಬೇಕು ಎಂದು ತಹಸೀಲ್ದಾರ ಕೆ. ರಾಘವೇಂದ್ರ ರಾವು ಹೇಳಿದರು.ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಗಣೇಶ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಾಂತಿ ಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಬಣ್ಣಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರ ಹಾಗೂ ಜಿಲ್ಲಾ, ತಾಲೂಕು ಆಡಳಿತದ ಮಾರ್ಗಸೂಚಿಗಳನ್ನು ತಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಶಿರಹಟ್ಟಿ ಪಟ್ಟಣ ಕೋಮು ಸೌಹಾರ್ದತೆ, ಭಾವೈಕ್ಯತೆಗೆ ಹೆಸರು ಪಡೆದಿದೆ. ಎಲ್ಲ ಸಮಾಜದವರು ಭಾವೈಕ್ಯದಿಂದ ಈ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು. ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ ಮಂಡಳಿಗಳು ನಿಗಾವಹಿಸಿ ಇಲಾಖೆಗಳೊಂದಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಬೇಕು. ಕನಿಷ್ಠ ಶಬ್ದದ ಧ್ವನಿ ವರ್ಧಕಗಳನ್ನು ಬಳಸಿ. ಕಡಿಮೆ ವಿದ್ಯತ್ ಬಳಕೆ ಮಾಡಿದರೆ ಉತ್ತಮ. ಹೊಸ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಟ್ರಾಪಿಕ್ ತೊಂದರೆ ಮಾಡಬೇಡಿ. ಶಾಂತಿ ಸುವ್ಯವಸ್ಥೆಯಿಂದ ಗೌರಿ ಗಣೇಶ ಹಬ್ಬ ಆಚರಿಸಬೇಕು. ಹಬ್ಬಗಳು ವಿಶ್ವಾಸ, ಬಾಂದವ್ಯ ಪ್ರೀತಿಯನ್ನು ಕೆಡಿಸುವ ರೀತಿಯಲ್ಲಿ ನಡೆಯಬಾರದು. ಹಬ್ಬಗಳ ಆಚರಣೆ ಉತ್ಸವಕ್ಕೆ ಕಾರಣವಾಗಬೇಕು ಎಂದು ಹೇಳಿದರು.
ಪಿಎಸ್ಐ ಈರಪ್ಪ ರಿತ್ತಿ ಮಾತನಾಡಿ, ಕಾನೂನು ಸೂವ್ಯವಸ್ಥೆಗೆ ಅಡೆತಡೆ ಆಗದಂತೆ ಶಾಂತಿಯುತವಾಗಿ ಹಬ್ಬ ಆಚರಣೆಗೆ ಮುಂದಾಗಬೇಕು. ಕಾನೂನು ಪರಿಮಿತಿಯಲ್ಲಿ ಯಾರಭಾವನೆಗಳಿಗೂ ದಕ್ಕೆಯಾಗದಂತೆ ಹಬ್ಬ ಆಚರಣೆಗೆ ಮುಂದಾಗಬೇಕು. ಕಾನೂನುಬಾಹಿರ ಚಟುವಟಿಕೆ ನಡೆಯಬಾರದು. ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದರು.ಜಿಲ್ಲಾಧಿಕಾರಿ ಆದೇಶದಂತೆ ಹಬ್ಬದಲ್ಲಿ ಯಾವುದೇ ರೀತಿಯ ಡಿಜೆ ಹಚ್ಚಲು ಅವಕಾಶ ಇರುವುದಿಲ್ಲ. ಸಂಪೂರ್ಣ ಡಿಜೆ ನಿಷೇಧಿಸಲಾಗಿದೆ. ಇಲಾಖೆ ಷರತ್ತುಗಳಿಗೆ ಒಳಪಟ್ಟುಹಬ್ಬ ಆಚರಣೆ ಮಾಡಬೇಕು. ಪಟಾಕಿಯನ್ನು ಯಾರಬೇಕು ಅವರು ಮಾರುವಂತಿಲ್ಲ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದವರು ಬಯಲು ಪ್ರದೇಶದಲ್ಲಿ ಮಾರಾಟ ಮಾಡಬೇಕು ಎಂದು ತಿಳಿಸಿದರು. ಮೇಲೆ ತಿಳಿಸಿದ ಎಲ್ಲ ಇಲಾಖೆಗಳ ಅನುಮತಿ ಪಡೆದೇ ಗಣಪತಿ ಪ್ರತಿಷ್ಠಾಪನೆ ಮಾಡಬೇಕು. ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಎಚ್.ಜೆ. ಭಾವಿಕಟ್ಟಿ, ಎನ್.ಐ. ಅಡಿವೆಣ್ಣವರ, ಶಿವಾನಂದ ಮಾಳವಾಡ ಸೇರಿದಂತೆ ಹೆಸ್ಕಾಂ, ಅಗ್ನಿಶಾಮಕ ಠಾಣೆ, ಪಟ್ಟಣ ಪಂಚಾಯತ ಇಲಾಖೆಯ ಅಧಿಕಾರಿಗಳು ಇದ್ದರು.