ಸಾರಾಂಶ
ಶಿವಮೊಗ್ಗ: ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಾನ ಮನಸ್ಕರ ತಂಡವಾಗಿರುವ ಅನವರತ ವತಿಯಿಂದ ನ.27 ರಂದು ಸಾಂಸ್ಕೃತಿಕ ಸೊಗಡು ಬಿಂಬಿಸುವ ಸಿಹಿಮೊಗೆ ಸಂಭ್ರಮ-1 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅನವರತ ಗೌರವಾಧ್ಯಕ್ಷ, ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜನಪದ ನೃತ್ಯ, ಜನಪದ ಗೀತೆ, ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಗೆ 16ರಿಂದ 35 ವರ್ಷ ವಯೋಮಿತಿಯವರಿಗೆ ಮಾತ್ರ ಅವಕಾಶವಿದೆ. ಆಸಕ್ತರು ಆನ್ಲೈನ್ ಮೂಲಕ ನೊಂದಾಯಿಸಲು ನ. 24 ಕೊನೆಯ ದಿನವಾಗಿದೆ ಎಂದರು.ಅಂದು ಸಂಜೆ 6ಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷ ಸಂಭ್ರಮ ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ಅಯೋಧ್ಯಾ ದೀಪ ಪ್ರಸಂಗ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವರ ಅಭಿಮಾನಿಗಳು ಕೂಡ ನಾಡಿನಾದ್ಯಂತ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಯಕ್ಷಗಾನದಲ್ಲಿ ಹಲವಾರು ವಿಭಿನ್ನ ಪ್ರಯೋಗಗಳನ್ನು ಮಾಡಿದ್ದಾರೆ. ಹೆಸರು ನೋಂದಾಯಿಸುವ ಆಸಕ್ತರು ಜನಪದ ನೃತ್ಯಕ್ಕೆ 9449967914, ಜನಪದ ಹಾಡುಗಳಿಗೆ 8310876277, ಚಿತ್ರಕಲಾ ಸ್ಪರ್ಧೆಗೆ 7022244434, ಛಾಯಾಗ್ರಹಣ ಸ್ಪರ್ಧೆಗೆ 9743444585 ಸಂಪರ್ಕಿಸಬಹುದಾಗಿದೆ ಎಂದರು.ಗೋಷ್ಠಿಯಲ್ಲಿ ಪ್ರಮುಖರಾದ ಎಸ್. ಜ್ಞಾನೇಶ್ವರ್, ಎನ್.ಜಿ. ನಾಗರಾಜ್, ಯಕ್ಷ ಸಂವರ್ಧನ ಟ್ರಸ್ಟ್ ಆನಂದ ಶೆಟ್ಟಿ, ಶ್ರೀನಿವಾಸ್ ಆಚಾರ್ಯ, ಕಿರಣ್ ಪೈ, ಮರವಂತೆ ಅಚ್ಯುತ್ ಹೆಬ್ಬಾರ್, ಬಾಬಣ್ಣಘಿ, ಅನವರತ ತಂಡದ ಸುನೀಲ್, ನವೀನ್, ಸಹನಾಚೇತನ್ ಇದ್ದರು.