ಆಪರೇಷನ್ ಸಿಂದೂರ ಬೆಂಬಲಿಸಿ ಹಾವೇರಿಯಲ್ಲಿ ಸಂಭ್ರಮ

| Published : May 08 2025, 12:30 AM IST

ಸಾರಾಂಶ

ಪಹಲ್ಗಾಮ್ ದಾಳಿಯಲ್ಲಿ 26 ಹಿಂದೂ ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು ದುಃಖದ ಪರಿಸ್ಥಿತಿಯಲ್ಲಿದ್ದಾರೆ. ಅವರ ಹಣೆಯ ಮೇಲಿನ ಕುಂಕುಮ ಕಸಿದುಕೊಂಡ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳನ್ನು ಅವರದೇ ನಾಡಿನಲ್ಲಿ ಹೆಡೆಮುರಿ ಕಟ್ಟಿ ಭಾರತದ ಹೆಣ್ಣುಮಕ್ಕಳ ಕುಂಕುಮಕ್ಕೆ ಗೌರವ ತರುವ ನಿಟ್ಟಿನಲ್ಲಿ ಆಪರೇಷನ್ ಸಿಂದೂರ ನಡೆಸಿರುವುದು ದೇಶದಲ್ಲಿರುವ ಕೋಟ್ಯಂತರ ಜನರಿಗೆ ಸಂತಸದ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಇಸಿದರು.

ಹಾವೇರಿ: ಭಾರತೀಯ ವಾಯುಸೇನೆ ನಡೆಸಿದ ಆಪರೇಷನ್ ಸಿಂದೂರ ಬೆಂಬಲಿಸಿ, ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಹೊರಹಾಕಬೇಕೆಂದು ಆಗ್ರಹಿಸಿ ಬುಧವಾರ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಇದೇ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪಕ್ಷದ ಕಾರ್ಯಕರ್ತರ ಹಣೆಗೆ ತಿಲಕವಿಟ್ಟು ಆಪರೇಷನ್ ಸಿಂದೂರ ಬೆಂಬಲಿಸಿ ಸಂಭ್ರಮಿಸಿದರು. ಈ ವೇಳೆ ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಈ ಸಂದರ್ಭದಲ್ಲಿಯೂ ಅನುಸರಿಸುತ್ತಿರುವುದು ಮೂರ್ಖತನದ ಪರಮಾವಧಿಯಾಗಿದೆ. ವಿಶ್ವದ ಹಲವಾರು ರಾಷ್ಟ್ರಗಳು ಭಾರತ ಪಾಕಿಸ್ತಾನದ ಮೇಲೆ ಸಾರಿರುವ ಯುದ್ಧವನ್ನು ಬೆಂಬಲಿಸುತ್ತಿದ್ದರೆ ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಸಾಮಾಜಿಕ ಜಾಲತಾಣದಲ್ಲಿ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಬಿತ್ತರಿಸುವ ಮೂಲಕ ಭಾರತದ ಸೈನ್ಯವನ್ನು ಅವಮಾನಿಸುತ್ತಿದೆ. ಪಹಲ್ಗಾಮ್ ದಾಳಿಯಲ್ಲಿ 26 ಹಿಂದೂ ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು ದುಃಖದ ಪರಿಸ್ಥಿತಿಯಲ್ಲಿದ್ದಾರೆ. ಅವರ ಹಣೆಯ ಮೇಲಿನ ಕುಂಕುಮ ಕಸಿದುಕೊಂಡ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳನ್ನು ಅವರದೇ ನಾಡಿನಲ್ಲಿ ಹೆಡೆಮುರಿ ಕಟ್ಟಿ ಭಾರತದ ಹೆಣ್ಣುಮಕ್ಕಳ ಕುಂಕುಮಕ್ಕೆ ಗೌರವ ತರುವ ನಿಟ್ಟಿನಲ್ಲಿ ಆಪರೇಷನ್ ಸಿಂಧೂರ ನಡೆಸಿರುವುದು ದೇಶದಲ್ಲಿರುವ ಕೋಟ್ಯಂತರ ಜನರಿಗೆ ಸಂತಸದ ಸಂಗತಿಯಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಮುಕುಟ ಪ್ರಾಯವಿದ್ದಂತೆ. ಅಲ್ಲಿ ದಾಳಿ ಮಾಡಿ ಹತ್ಯೆ ಮಾಡಿದ್ದು ಮನುಕುಲಕ್ಕೆ ವಿರುದ್ಧವಾಗದೆ. ಪಾಕಿಸ್ತಾನ ಭಯೋತ್ಪಾದಕರನ್ನು ತನ್ನ ನೆಲದಲ್ಲಿ ಘೋಷಣೆ ಮಾಡುತ್ತಿರುವುದು ಜಗತ್ತಿಗೆ ಕಂಟಕಪ್ರಾಯವಾಗಿದೆ. ಆಪರೇಷನ್ ಸಿಂಧೂರ ಮೂಲಕ ಭಾರತ ಪಾಕಿಸ್ತಾನಕ್ಕೆ ಮರೆಯಲಾರದ ಉತ್ತರ ಕೊಡುತ್ತಿದೆ. ನಾವೆಲ್ಲರೂ ಪಕ್ಷಭೇದ ಮರೆತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನೀತಿಯನ್ನು ಬೆಂಬಲಿಸುವ ಮೂಲಕ ನಾವೆಲ್ಲರೂ ಒಂದು ಎಂಬ ಸಂದೇಶವನ್ನು ನೀಡೋಣ.

ರಾಜ್ಯ ಕಾಂಗ್ರೆಸ್ ನಾಯಕರು ಯುದ್ಧದ ಕುರಿತು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಂ ದಾಳಿಯಲ್ಲಿ ಸಿಂಧೂರ ಕಳೆದುಕೊಂಡ ಭಾರತೀಯ ಮಹಿಳೆಯರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಆಪರೇಷನ್ ಸಿಂಧೂರ ನಡೆಸಿ ಹತ್ಯೆಗೆ ಕಾರಣವಾದ ಪಾಕಿಸ್ತಾನಿ ಉಗ್ರರನ್ನು ಹಾಗೂ ಭಯೋತ್ಪಾದಕತೆಗೆ ಬೆಂಬಲಿಸುತ್ತಿರುವ ಪಾಕಿಸ್ತಾನವನ್ನು ಸದೆ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಈವರೆಗೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುವಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿ ಆಯಾ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಗುರುತಿಸಿ ಅವರನ್ನು ಗಡಿಪಾರು ಮಾಡಬೇಕೆಂದು ನಿರ್ದೇಶಿಸಿತ್ತು. ಆದರೆ ಮತ ಬ್ಯಾಂಕ್ ಓಲೈಕೆಗೆಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಶೀಘ್ರವಾಗಿ ಹೊರಹಾಕುವಲ್ಲಿ ವಿಫಲವಾಗಿದೆ ಎಂದರು. ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದ ಮೇಲೆ ಭಯೋತ್ಪಾದಕ ದಾಳಿಗಳು ನಡೆದರೆ ಅದು ತನಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆಯನ್ನು ಪಾಕಿಸ್ತಾನ ನಿರಾತಂಕವಾಗಿ ಹೇಳುತ್ತಾ ಬಂದಿತ್ತು. ಆದರೆ ಇತ್ತೀಚೆಗೆ ನಡೆದ ದಾಳಿಯಲ್ಲಿ ಹಿಂದೂ ಧರ್ಮದವರನ್ನು ಗುರುತಿಸಿ ಹತ್ಯೆ ಮಾಡಿದ್ದು ಅತ್ಯಂತ ನೋವಿನ ಸಂಗತಿ. ಮೃತಪಟ್ಟ ವ್ಯಕ್ತಿಯ ಮಗನಿಗೆ ಉಗ್ರಗಾಮಿ ಇದನ್ನು ಮೋದಿಜಿಗೆ ಹೇಳು ಎಂದು ಹೇಳಿಕೆ ನೀಡಿದ್ದ ಆ ಹೇಳಿಕೆಯನ್ನು ಸ್ವೀಕರಿಸಿದ ಪ್ರಧಾನಿ ಇಂದು ತಕ್ಕ ಉತ್ತರವನ್ನು ನೀಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ್ ಕಳ್ಳೇರ, ವೆಂಕಟೇಶ ನಾರಾಯಣಿ, ಕಿರಣ್ ಕೋಣನವರ, ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ, ರುದ್ರೇಶ ಚಿನ್ನಣ್ಣನವರ, ವಿಜಯಕುಮಾರ್ ಚಿನ್ನಿಕಟ್ಟಿ, ಗುಡ್ಡಪ್ಪ ಭರಡಿ, ಅಲ್ಲ್ಲಾಭಕ್ಷ ತಿಮ್ಮಾಪುರ, ಆಂಜನೇಯ, ಗಿರೀಶ್ ಶೆಟ್ಟರ, ಅಡಿವಯ್ಯ ಯಲವಗಿಮಠ, ನಾಗರಾಜ ಹರಿಗೋಲ, ಪ್ರಶಾಂತ ಬೆನ್ನೂರ್, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಫಕ್ಕಿರೇಶ ಹಾವನೂರ, ಮಂಜು ಮಲಗೋಡ, ನಿಖಿಲ ಹಿರೇಮಠ, ಶ್ರೀದೇವಿ ರೆಡ್ಡಿ, ರೇಣುಕಾ ಗೌಳಿ, ಸತೀಶ್ ಗೌಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಸಹಿ ಸಂಗ್ರಹ ಅಭಿಯಾನ..ನಗರದ ಹೊಸಮನಿ ಸಿದ್ದಪ್ಪ ವೃತ್ತ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ವಿವಿಧ ವರ್ಗದ ಜನರನ್ನು ಸಂಪರ್ಕಿಸಿ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕಲು ಬೆಂಬಲಿಸಿ ಸಹಿ ಸಂಗ್ರಹ ನಡೆಸಿದರು. ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ನೇತೃತ್ವದಲ್ಲಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.