ಕನ್ನಡಪ್ರಭ ವಾರ್ತೆ ಸಕಲೇಶಪುರ ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಗೆಲುವನ್ನು ಹಿಂದುತ್ವದ ಗೆಲುವೆಂದು ಪಟಾಕಿ ಸಿಡಿಸಿ, ಪಂಜು ಹಿಡಿದು, ಸಿಹಿ ಹಂಚಿ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ರಘು, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಅನೇಕ ಬಡ ಹಿಂದೂ ಕುಟುಂಬಗಳು ಮಾನ, ಪ್ರಾಣ ತ್ಯಾಗ ಮಾಡಿ ಬಲಿದಾನವಾಗಿವೆ. ಅಂಥ ತ್ಯಾಗಜೀವಿಗಳ ಪರಿಶ್ರಮದಿಂದ ಅಭೂತಪೂರ್ವ ಗೆಲುವು ಸಾಧಿಸಲಾಗಿದೆ ಎಂದು ತಿಳಿಸಿದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಂಜೆ 6:30ಕ್ಕೆ ಸಕಲೇಶಪುರ ನಗರದ ಹಳೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಮಾವಣೆಗೊಂಡ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಪಂಜು ಹಿಡಿದು ಪಶ್ಚಿಮ ಬಂಗಾಳದಲ್ಲಿ ಬಲಿದಾನಗೈದ ಹಿಂದೂಗಳನ್ನು ಸ್ಮರಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ, ವಿಶೇಷವಾಗಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಧನ್ಯವಾದ ಸಲ್ಲಿಸಿದರು.ಹಿಂದೂ ಹಿತರಕ್ಷಣಾ ವೇದಿಕೆಯ ಮಂಜುನಾಥ್ ಕಬ್ಬಿನಗದ್ದೆ, ಕೌಶಿಕ್ ಎಚ್. ಎಂ, ಶಿವು ಜಿಪ್ಪಿ, ಶ್ರೀಜಿತ್ ಗೌಡ, ವಿಜಿತ್ ಗೌಡ, ರವಿ ಹೆಬ್ಬಸಾಲೆ, ಶೇಖರ್‌ ಕಬ್ಬಿನಗದ್ದೆ, ಹರ್ಷ, ಪ್ರಸನ್ನ, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.