ಸಮೀಕ್ಷೆ ಸ್ಥಳ ದೂರ ಇದ್ದರೂ ಗಣತಿಮಾಡಲೇಬೇಕು: ಮಹೇಶ್ವರ ರಾವ್‌

| Published : Oct 07 2025, 02:00 AM IST

ಸಮೀಕ್ಷೆ ಸ್ಥಳ ದೂರ ಇದ್ದರೂ ಗಣತಿಮಾಡಲೇಬೇಕು: ಮಹೇಶ್ವರ ರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಸ್ಥಳವು ಮನೆಯಿಂದ ದೂರವಿದ್ದರೂ, ಸಮೀಕ್ಷೆಯನ್ನು ಮಾಡಲೇಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಸ್ಥಳವು ಮನೆಯಿಂದ ದೂರವಿದ್ದರೂ, ಸಮೀಕ್ಷೆಯನ್ನು ಮಾಡಲೇಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.

ತಮ್ಮ ವಾಸದ ಸ್ಥಳಕ್ಕಿಂತ ದೂರ ಇರುವ ಸ್ಥಳಗಳಲ್ಲಿ ಸಮೀಕ್ಷೆಗೆ ನಿಯೋಜಿಸಲಾಗಿದೆ ಎಂದು ಸಮೀಕ್ಷಕರು ದೂರುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಅವರು, ಬಹುತೇಕರಿಗೆ ಅವರು ಆಯ್ಕೆ ಮಾಡಿದ ಸ್ಥಳಗಳಲ್ಲೇ ಸಮೀಕ್ಷೆಯ ಕೆಲಸ ಸಿಕ್ಕಿದೆ. ಕೆಲವರು ಮಾತ್ರ ಸಮೀಕ್ಷೆಯ ಪ್ರದೇಶ ದೂರ ಇದೆ ಎಂದು ಹೇಳಿದ್ದಾರೆ. ದೂರ ಇದ್ದರೂ ಮಾಡಲೇಬೇಕು. ಏಕೆಂದರೆ, ಆ ಪ್ರದೇಶದಲ್ಲೂ ಸಮೀಕ್ಷೆ ಮಾಡಬೇಕಲ್ಲವೇ? ಎಂದು ಮಹೇಶ್ವರ್ ರಾವ್ ಪ್ರಶ್ನಿಸಿದರು.ಕೆಲವೆಡೆ ಮನೆಗಳನ್ನು ಹುಡುಕಲು ಸಮಸ್ಯೆಯಾಗುತ್ತಿದೆ ಎಂದು ದೂರುಗಳು ಬಂದಿವೆ. ಇಂತಹ ಸಮಸ್ಯೆಗಳು ಇರುವುದು ನಿಜ. ಇಂತಹ ತಾಂತ್ರಿಕ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಗರ್ಭಿಣಿಯಾಗಿರುವುದು, ಪುಟ್ಟ ಮಕ್ಕಳು, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ 2000 ಜನರಿಗೆ ವಿನಾಯಿತಿ ನೀಡಲಾಗಿದೆ ಎಂದು ಮಹೇಶ್ವರ್ ತಿಳಿಸಿದರು.

ಮಕ್ಕಳ ಬಳಕೆ ಬಗ್ಗೆ ಕ್ರಮ:

ಚಿಕ್ಕಲಸಂದ್ರದಲ್ಲಿ ಸಮೀಕ್ಷೆ ಕೆಲಸಕ್ಕೆ ಮಕ್ಕಳನ್ನು ಬಳಕೆ ಮಾಡಿರುವ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಮಹೇಶ್ವರ ರಾವ್ ಹೇಳಿದ್ದಾರೆ.

1.41 ಲಕ್ಷ ಮನೆ ಸಮೀಕ್ಷೆ:

ಅನೇಕ ಗೊಂದಲಗಳ ನಡುವೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸೋಮವಾರ 1.41 ಲಕ್ಷ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗಿದೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ 2.66 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.

ಸಮೀಪದ ವಾರ್ಡ್‌ಗೆ

ನಿಯೋಜಿಸಿ: ಆಗ್ರಹ

ತಮ್ಮ ಮನೆ ಅಥವಾ ಕೆಲಸದ ಸ್ಥಳದ ಸಮೀಪದ ವಾರ್ಡ್‌ನಲ್ಲಿ ಸಮೀಕ್ಷೆಯ ಕೆಲಸಕ್ಕೆ ನಿಯೋಜಿಸಬೇಕು. ದೂರದ ಪ್ರದೇಶಗಳಲ್ಲಿ ಸಮೀಕ್ಷೆ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಕೋರಿ ನೂರಾರು ಸಮೀಕ್ಷಕರು ಮಲ್ಲೇಶ್ವರದಲ್ಲಿರುವ ಜಿಬಿಎ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಮಾಡಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಸಕಾರಣ ಇಲ್ಲದೇ ಸಮೀಕ್ಷೆ ಕರ್ತವ್ಯಕ್ಕೆ ಗೈರು ಹಾಜರಾಗಿರುವ ವಿರುದ್ಧ ಕ್ರಮಕ್ಕೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

- ಮಹೇಶ್ವರ ರಾವ್, ಜಿಬಿಎ ಮುಖ್ಯ ಆಯುಕ್ತ