ಉಡುಪಿ: ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹುಕ್ಲಮಕ್ಕಿ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿಯ ಶತಮಾನೋತ್ಸವ ಕಾರ್ಯಕ್ರಮ ಭಾನುವಾರ ಜರುಗಿತು. ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಮ ಹೆಗಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ್ದರು. ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ಈ ಸಂದರ್ಭ ಮಲ್ಪೆ ಶಂಕರನಾರಾಯಣ ಸಾಮಗರು 85 ವರ್ಷದ ಹಿಂದೆ ಬರೆದ ಡಾ. ಶ್ರೀಪಾದ ಹೆಗಡೆ ಹುಕ್ಳಮಕ್ಕಿ ಸಂಪಾದಿಸಿ ಪ್ರಕಟಿಸಿದ ಅರ್ಥಸಹಿತ ‘ಅಂಗದ ಸಂಧಾನ’ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.ಈ ಸಂದರ್ಭ ಯಕ್ಷಗಾನದ ಹಿರಿಯ ಸಾಧಕರಾದ ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಎಂ.ಎಲ್. ಸಾಮಗ, ಶ್ರೀಧರ ಡಿ. ಎಸ್., ಡಾ. ಜಿ.ಎಲ್. ಹೆಗಡೆ ಅವರನ್ನು ಸಮ್ಮಾನಿಸಲಾಯಿತು. ಸುವರ್ಣ ವರ್ಷಾಚರಣೆ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗಕ್ಕೆ, ಮಂಡಳಿಯ ಶತಮಾನ ಆಚರಣೆಯ ನೆನಪಿನ ಗೌರವವನ್ನು ಪ್ರದಾನ ಮಾಡಲಾಯಿತು. ಸಂಸ್ಥೆಯ ಪರವಾಗಿ ಹಿರಿಯ ಉಪಾಧ್ಯಕ್ಷ ಎಸ್.ವಿ. ಭಟ್ ಗೌರವ ಸ್ವೀಕರಿಸಿದರು. ಶತಮಾನದ ಸಂಭ್ರಮದಲ್ಲಿರುವ ಹುಕ್ಲಮಕ್ಕಿ ಮೇಳವನ್ನು ಪ್ರಸ್ತುತ ಮುನ್ನಡೆಸುತ್ತಿರುವ ಸಿ.ಎಸ್. ಗೋಪಾಲಕೃಷ್ಣ, ಡಾ. ಶ್ರೀಪಾದ ಹೆಗಡೆ ಸಹೋದರರನ್ನು ಯಕ್ಷಗಾನ ಕಲಾರಂಗದ ವತಿಯಿಂದ ಶಾಲು, ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು.
ನ್ಯಾಯವಾದಿ ಸತೀಶ ಭಟ್ ಉಳಗೆರೆ ಸನ್ಮಾನಪತ್ರ ವಾಚಿಸಿದರು. ದತ್ತಾತ್ರಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅನಂತರ ಹುಕ್ಲಮಕ್ಕಿ ಮೇಳದ ಕಲಾವಿದರಿಂದ ’ಕರಂಡಕಾಸುರ ಕಾಳಗ’ ಪ್ರಸ್ತುತಗೊಂಡಿತು.