ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾರ್ಮಿಕರು, ಕೃಷಿ ಕೂಲಿಕಾರರು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ದೂರಿದರು.ಪಟ್ಟಣದ ಶಾದಿ ಮಹಲ್ನಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ದೇಶದ ಅಭಿವೃದ್ಧಿ ದುಡಿಯುವ ಶಕ್ತಿಯಿಂದಲೇ ಎನ್ನುವುದನ್ನು ಆಡಳಿತ ನಡೆಸುವ ಸರ್ಕಾರಗಳು ಮರೆತ್ತಿವೆ, ಒಗ್ಗಟ್ಟಿನಿಂದ ಹೋರಾಟ ಮಾಡುವಮೂಲಕ ಸರ್ಕಾರಗಳನ್ನು ಎಚ್ಚರಿಸಬೇಕಿದೆ ಎಂದರು.
ಅಮೆರಿಕಾದ ನೀತಿಗಳಿಗೆ ಭಾರತ ಮಂಡಿಯೂರುತ್ತಿದೆ. ಎಲ್ಲ ಒಪ್ಪಂದಗಳಿಗೆ ಒಪ್ಪಿಕೊಂಡು ತಲೆಬಾಗುತ್ತಿದೆ. ಅಮೆರಿಕದ ವಸ್ತುಗಳು ಭಾರತಕ್ಕೆ ಬರಲು ಯಾವುದೇ ರೀತಿಯ ತೆರಿಗೆ ಇಲ್ಲ, ಆದರೆಸ ಭಾರತದ ವಸ್ತುಗಳು ಅಮೆರಿಕಾಗೆ ರಪ್ತು ಮಾಡಲು 18 ಪರ್ಸೆಂಟ್ ತೆರಿಗೆ ನೀಡಬೇಕು. ನಮ್ಮ ದೇಶದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದರೂ ಕೂಡ ದೇಶದ ಪ್ರಧಾನಿ ಭಾರತದ ಘನತೆ ಉಳಿಸಿಕೊಳ್ಳಲು ವಿಫಲರಾಗಿದ್ದಾರೆಂದು ಕಿಡಿಕಾರಿದರು.ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಮಾತನಾಡಿ, ಬಂಡವಾಳಶಾಹಿ ಭೂಮಾಲಿಕರ ಪರವಾದ ನೀತಿಗಳನ್ನುಅನುಸರಿಸುತ್ತಾ ಆದಾನಿ ಅಂಬಾನಿ ಕೈಗೊಂಬೆಯಾಗಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವು ಸಹ ಬಂಡವಾಳ ಶಾಹಿ ಭೂಮಾಲಿಕರ ನೀತಿಗೆ ಅನುಗುಣವಾಗಿದೆ. ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ರೈತ ವಿರೋಧಿ. ಬೀಜ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಅನುಸರಿಸಿದಂತೆ ರಾಜ್ಯ ಸರ್ಕಾರವು ಸಹ ಅನುಸರಿಸುತ್ತಿದೆ. ಬಳ್ಳಾರಿಯ 14,500 ಎಕರೆ ಭೂಮಿಯನ್ನು ಎಕರೆಗೆ ಕೇವಲ ಒಂದೂವರೆ ಲಕ್ಷದಂತೆ ಹರ್ಸೆಲ್ ಮಿತ್ತಲ್, ಬ್ರಾಹ್ಮಿಣಿ ಸ್ಟೀಲ್ ಕಂಪನಿಗಳಿಗೆ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ನೀಡಿದ್ದಾರೆ. ಆದರೆ, ಬಗರ್ ಹುಕುಂ ಸಾಗುವಳಿದಾರರಿಗೆ ಪತ್ರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೇಶನ ಕೊಟ್ಟಿಲ್ಲ, ಕೈಗಾರಿಕೋದ್ಯಮಗಳಿಗೆ ಉಚಿತ ವಿದ್ಯುತ್, ರಸ್ತೆ ಸೌಲಭ್ಯ ಕಲ್ಪಿಸುವ ಸರ್ಕಾರಗಳು ರೈತರ ಪಂಪ್ಸೆಟ್ಗಳಿಗೆ ದುಬಾರಿ ಶುಲ್ಕವನ್ನು ವಿಧಿಸಿ ಕಂಬ ವೈರು ಇತರೆ ಪರಿಕರಗಳನ್ನು ಸ್ವತಃ ರೈತರೆ ಖರೀದಿ ಮಾಡಬೇಕಾದ ಸ್ಥಿತಿ ನಿರ್ಮಿಸಿದ್ದಾರೆ. ನೀರಾವರಿ,ಆರೋಗ್ಯ, ಶಿಕ್ಷಣ. ಉದ್ಯೋಗಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಸಮ್ಮೇಳನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳಾದ ಎಂ.ಇ.ಮಹದೇವು, ಗುರುಸ್ವಾಮಿ, ಚಿಕ್ಕಸ್ವಾಮಿ, ಸತೀಶ್, ಕೆ.ಎನ್.ಮೂರ್ತಿ, ಗಣೇಶ್, ಪ್ರಮೀಳಾ, ಸುಶೀಲ . ಮರಿಲಿಂಗೇಗೌಡ, ಎಚ್.ಕೆ.ತಿಮ್ಮೇಗೌಡ, ನಾಗಮಣಿ, ಗಾಯಿತ್ರಿ, ಪದ್ಮ, ಮಂಗಳಮ್ಮ, ಮಂಜುಳಾ, ನಂಜುಂಡಸ್ವಾಮಿ, ಪರಿಮಳ, ಮಹಾದೇವಮ್ಮ ಸೇರಿದಂತೆ ಇತರರು ಇದ್ದರು.