ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಉತ್ಸುಕ: ಸಂಸದ ಕ್ಯಾ.ಬ್ರಿಜೇಶ್‌ ಚೌಟಗೆ ಕೇಂದ್ರ ಭರವಸೆ

| Published : Aug 08 2024, 01:35 AM IST

ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಉತ್ಸುಕ: ಸಂಸದ ಕ್ಯಾ.ಬ್ರಿಜೇಶ್‌ ಚೌಟಗೆ ಕೇಂದ್ರ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಇತರ ಭಾಷೆಗಳನ್ನು 8ನೇ ಶೆಡ್ಯೂಲ್‌ಗೆ ಸೇರಿಸುವ ಭಾವನೆಗಳು ಮತ್ತು ಅವಶ್ಯಕತೆಗಳ ಬಗ್ಗೆ ಸರ್ಕಾರವು ಜಾಗೃತವಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಸರ್ಕಾರ ಜಾಗೃತವಾಗಿದೆ ಎಂದು ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಗೆ ಕೇಂದ್ರ ಸರ್ಕಾರ ಲೋಕಸಭಾ ಅಧಿವೇಶನದಲ್ಲಿ ಮಂಗಳವಾರ ಉತ್ತರಿಸಿದೆ. ಈ ಬಗ್ಗೆ ಪ್ರಸ್ತಾಪಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಯ ಪ್ರಸ್ತುತ ಹಂತ ಹಾಗೂ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಜನರು ಒತ್ತಾಯಿಸುತ್ತಿರುವುದು ಸರ್ಕಾರದ ಗಮನದಲ್ಲಿ ಇದೆಯೇ ಎಂದು ಪ್ರಶ್ನೆ ಮಾಡಿದರು ಮತ್ತು ಸರ್ಕಾರ ಈ ಬಗೆಗೆ ಯಾವೆಲ್ಲಾ ಕ್ರಮ ಕೈಗೊಂಡಿದೆ ಎಂದು ಕೇಳಿದ್ದರು.ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪತ್ರ (2003) ಸಮಿತಿಯ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಎಂಟನೇ ಪರಿಚ್ಛೇದದ ಅಡಿಯಲ್ಲಿ ಹೆಚ್ಚಿನ ಭಾಷೆಗಳ ಸೇರ್ಪಡೆಗಾಗಿ ವಿನಂತಿಗಳನ್ನು ಪರಿಗಣಿಸಲು ಯಾವೆಲ್ಲಾ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, ತುಳು ಸೇರಿದಂತೆ ಇನ್ನಿತರ ಹಲವಾರು ಭಾಷೆಗಳು ಎಂಟನೇ ಶೆಡ್ಯೂಲ್‌ಗೆ ಸೇರಿಸಲು ಕಾಲಕಾಲಕ್ಕೆ ಬೇಡಿಕೆಗಳು ಬರುತ್ತಿವೆ, ಯಾವುದೇ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ಗೆ ಸೇರಿಸಲು ಯಾವುದೇ ಸ್ಥಿರ ಮಾನದಂಡಗಳಿಲ್ಲ. ಉಪಭಾಷೆಗಳು ಮತ್ತು ಭಾಷೆಗಳ ವಿಕಸನವು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು ಇದರ ಅಭಿವೃದ್ಧಿಯು ಸಾಮಾಜಿಕ - ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿರುತ್ತದೆ.ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಭಾಷೆಗಳಿಗೆ ಯಾವುದೇ ಮಾನದಂಡವನ್ನು ನಿಗದಿಪಡಿಸುವುದು ಕಷ್ಟಕರವಾಗಿದೆ. ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪತ್ರ (2003) ಸಮಿತಿಗಳ ಮೂಲಕ ಇಂತಹ ನಿಶ್ಚಿತ ಮಾನದಂಡಗಳನ್ನು ವಿಕಸನಗೊಳಿಸಲು ಹಿಂದಿನ ಪ್ರಯತ್ನಗಳು ಅನಿರ್ದಿಷ್ಟವಾಗಿವೆ, ಇತರ ಭಾಷೆಗಳನ್ನು 8ನೇ ಶೆಡ್ಯೂಲ್‌ಗೆ ಸೇರಿಸುವ ಭಾವನೆಗಳು ಮತ್ತು ಅವಶ್ಯಕತೆಗಳ ಬಗ್ಗೆ ಸರ್ಕಾರವು ಜಾಗೃತವಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.