ಹೊಸಪೇಟೆ: ಕಾರ್ಮಿಕ ಸಂಘಟನೆಗಳ ವಿರೋಧದ ಮಧ್ಯೆಯೂ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ದೇಶಾದ್ಯಂತ ಕಾರ್ಮಿಕರಿಗೆ ಕರಾಳ ದಿನ ಆರಂಭವಾದಂತಾಗಿದೆ. ಈಗಲಾದರೂ ಕಾರ್ಮಿಕ ವರ್ಗದವರು ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯುದರ್ಶಿ ಎಸ್.ವರಲಕ್ಷ್ಮೀ ಹೇಳಿದರು.

ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟದ ವತಿಯಿಂದ ನಡೆದ ಎರಡು ದಿನಗಳ ಕಾರ್ಮಿಕರ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ತಕ್ಷಣ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಓಲೈಕೆಗೆ ಮುಂದಾಗಿದೆ. ಅದರ ಭಾಗವಾಗಿ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸಿದೆ. ಹೊಸ ನಿಯಮಗಳು ಹಲವು ಬಗೆಯಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಂಚಿಸಲಿವೆ. ಇಎಸ್‌ಐ, ಪಿಎಫ್ ಸೌಲಭ್ಯ ದೊರಕದಂತೆ ಮಾಡಲಿದೆ. ಕಾಯಂ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳದಂತಹ ವಾತಾವರಣ ಸೃಷ್ಟಿಸಿದೆ. ಎಂಟು ಗಂಟೆ ಬದಲಿಗೆ 12 ಗಂಟೆ ಕೆಲಸ ಇನ್ನು ಕಡ್ಡಾಯವಾಗಲಿದೆ. ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಲಿದೆ. ಕಾರ್ಮಿಕ ನ್ಯಾಯಾಲಯವೇ ನಿರ್ಮೂಲನಗೊಳ್ಳಲಿದೆ. ಕಾರ್ಮಿಕ ನಿರೀಕ್ಷಕರ ಹುದ್ದೆಗಳು ರದ್ದಾಗಲಿವೆ. ಕಾರ್ಮಿಕ ಸಂಘಟನೆಗಳಿಗೆ ಹೊಡೆತ ಬೀಳಲಿದೆ. ಒಟ್ಟಾರೆ ಈ ಸನ್ನದು ಕಾರ್ಮಿಕರ ಪಾಲಿಗೆ ಮರಣಶಾಸನವೇ ಸರಿ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಈಗಾಗಲೇ ರಾಜ್ಯದಲ್ಲಿ 11 ಲಕ್ಷ ಮಂದಿ ಇದರಲ್ಲಿ ನೋಂದಣಿಯಾಗಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಈ ಯೋಜನೆಯನ್ನು ಸಾರಿಗೆ ಇಲಾಖೆ ಬದಲಿಗೆ ಕಾರ್ಮಿಕ ಇಲಾಖೆ ಮೂಲಕ ನಿರ್ವಹಿಸುವಂತಾಗಬೇಕು. ಸಾರಿಗೆ ಇಲಾಖೆಗೆ ಸಾಕಷ್ಟು ಇತರ ಕೆಲಸಗಳು ಇರುವ ಕಾರಣ ಕಲ್ಯಾಣ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯೇ ನಡೆಸುವಂತಾಗಬೇಕು ಎಂದು ವರಲಕ್ಷ್ಮೀ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಕುಪ್ಪುಸ್ವಾಮಿ ಮಾತನಾಡಿದರು. ಕಾರ್ಮಿಕ ಮುಖಂಡರಾದ ಆರ್.ಎಸ್. ಬಸವರಾಜ, ಬಿ.ವಿ. ರಾಘವೇಂದ್ರ, ರೇವಪ್ಪ, ಸಪ್ನಾ, ಕೆ.ಎಂ. ಸಂತೋಷ್ ಕುಮಾರ್, ಎ. ಕರುಣಾನಿಧಿ ಸೇರಿದಂತೆ ಇತರರು ಉಪಸ್ಥಿತರಿದ್ದರು.