ಸಾರಾಂಶ
- ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ಆಂಜನೇಯ ವಿಷಾದಕನ್ನಡಪ್ರಭವಾರ್ತೆ ಚಿತ್ರದುರ್ಗ
ದೇಶದ ಸಮಗ್ರ ಅಭಿವೃದ್ಧಿಗೆ ಸರ್ವಶ್ರೇಷ್ಠ ಸಂವಿಧಾನ ರಚಿಸಿ 75 ವರ್ಷ ಕಳೆದಿದೆ. ಗಣತಂತ್ರ ದಿನ ಆಚರಣೆಗೆ ಕೇಂದ್ರ ಸರ್ಕಾರ ಸಂಭ್ರಮದ ಸ್ಪರ್ಶ ನೀಡದೇ ಇರುವುದು ನೋವಿನ ಸಂಗತಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಆಂಜನೇಯ ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಾತನಾಡಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂರವರು ಭಾರತದ ಮೊದಲನೇ ಕಾನೂನು ಮಂತ್ರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೇಮಕ ಮಾಡಿದ ಪರಿಣಾಮ ಸಂವಿಧಾನ ರಚನೆಯಾಯಿತು. ಅಂಬೇಡ್ಕರ್ ರವರು ತಮ್ಮ ಜವಬ್ದಾರಿ ಅರಿತು ವಿವಿಧ ದೇಶಗಳನ್ನು ಸುತ್ತಿ ಅಲ್ಲಿನ ಕಾನೂನನ್ನು ಅಧ್ಯಯನ ಮಾಡಿದರು. ಸರ್ವರ ಏಳಿಗೆಗೆ ಯಾವ ಕಾನೂನು ಬೇಕು ಎಂಬುದನ್ನು ಅರಿತು ಇಡೀ ವಿಶ್ವವೇ ಮೆಚ್ಚುವಂಥ ಒಂದು ಸಂವಿಧಾನವನ್ನು ರಚಿಸಿದರು. ಸಂವಿಧಾನ ದೇಶಕ್ಕೆ ಸಮರ್ಪಣೆಯಾಗಿ 75 ವರ್ಷ ಕಳೆಯಿತು. ಇಂತಹ ಮಹಾನ್ ಸಾಧನೆಯ ದಿನಕ್ಕೆ 75 ವರ್ಷಗಳಾಗಿವೆ. ಇದಕ್ಕೆ ಸಂಭ್ರಮದ ಸ್ಪರ್ಶ ನೀಡಬೇಕಾದ ಪ್ರಧಾನಿ ರಾಮ ಮಂದಿರದ ಉದ್ಘಾಟನೆಯಲ್ಲಿ ಮುಳುಗಿದ್ದರು ಎಂದು ದೂರಿದರು.ದೇಶಕ್ಕೆ ಸ್ವತಂತ್ರ ಲಭಿಸಲು ಮತ್ತು ದೇಶವನ್ನು ಅಭಿವೃದ್ಧಿಯತ್ತ ಸಾಗಲು ಕಾರಣರಾದ ಮಹಾತ್ಮಗಾಂಧಿ, ಪಂಡಿತ್ ಜವಾಹರ್ ಲಾಲ್ ನೆಹರು, ಲಾಲ್ ಬಹದೂರ್ ಶಾಸ್ತ್ರಿ, ಇಂದಿರಾಗಾಂಧಿಯವರನ್ನು ನೆನಪೇ ಇಲ್ಲದಂತಹ ಸ್ಥಿತಿ ನಿರ್ಮಾಣ ಮಾಡುತ್ತಿರುವುದು ದುಃಖಕರ ಎಂದರು.
ಬ್ರಿಟೀಷರು 300 ವರ್ಷಗಳ ಕಾಲ ಈ ರಾಷ್ಟ್ರವನ್ನು ಆಳ್ವಿಕೆ ನಡೆಸಿ ನಮ್ಮ ಸಂಪತ್ತನ್ನೆಲ್ಲ ದೋಚಿಕೊಂಡು ಹೋದರು. ಗುಲಾಮಗಿರಿಗೆ ಒಳಪಟ್ಟಿದ್ದ ಜನರನ್ನು ಬಿಡುಗಡೆಗೊಳಿಸಲು ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಚಳವಳಿ ನಡೆದಿದ್ದರಿಂದ ನಮಗೆ ಸ್ವಾತಂತ್ರಯ ಲಭಿಸಿತು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಪ್ರಧಾನಮಂತ್ರಿ ಆದ ಸಮಯದಲ್ಲಿ ಉಡುವ ಬಟ್ಟೆ ಹರಿದರೆ ಅದನ್ನು ಹೊಲಿಗೆ ಹಾಕಿಸುವ ಯಂತ್ರವೂ ಸೇರಿದಂತೆ ವಿಮಾನ, ಸುಸಜ್ಜಿತ ರಸ್ತೆಯೂ ನಮ್ಮಲ್ಲಿ ಇರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಸದೃಢ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದು ನೆನಪಿಸಿದರು.ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟೀಷರ ಗುಂಡಿಗೆ ಎದೆಗೊಡುವ ಸಮಯದಲ್ಲಿ ಇವರು ಪರಿಶಿಷ್ಟ ಜಾತಿ, ಪಂಗಡದವರು, ಮುಸ್ಲಿಮರು, ಹಿಂದೂ, ಸಿಖ್ಖರು ಎನ್ನುವುದನ್ನು ನೋಡಲಿಲ್ಲ. ನಮಗೆ ಭಾರತ ಬ್ರಿಟೀಷರ ಸಂಕೋಲೆಯಿಂದ ಮುಕ್ತಿ ಹೊಂದಿ ಸ್ವತಂತ್ರ ಆಗಬೇಕು. ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ತೊಲಗಬೇಕು ಎನ್ನುವ ಸಂಕಲ್ಪವಿತ್ತು. ಹಿರಿಯರ ಹೋರಾಟ ಮತ್ತು ತ್ಯಾಗದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಮಾಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ಸಂಪತ್ ಕುಮಾರ್ ಮತ್ತಿತರರಿದ್ದರು.