ಹಗರಿಬೊಮ್ಮನಹಳ್ಳಿ: ಕಾರ್ಮಿಕರ ಕಲ್ಯಾಣ ಕುರಿತಂತೆ ಕನಿಷ್ಠ ಕಾಳಜಿ ಇಲ್ಲದ ಕೇಂದ್ರ ಸರ್ಕಾರ, ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಕುಟುಂಬಗಳನ್ನು ಬೀದಿ ಪಾಲಾಗಿಸಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಸಿಐಟಿಯು ತಾಲೂಕು ಘಟಕ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ದೇಶದ ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಸರಕಾರ ಬಲ ನೀಡುತ್ತಿಲ್ಲ ಎಂದು ದೂರಿದರು.

ವೈಜ್ಞಾನಿಕವಾದ ಕನಿಷ್ಠ ವೇತನ ಮತ್ತು ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ದೇಶದಾದ್ಯಂತ ಕಾರ್ಮಿಕರು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿವೆ ಎಂದು ಬೇಸರಿಸಿದರು.

ಈ ಹಿಂದೆ ಕಾರ್ಮಿಕರ ಕಲ್ಯಾಣಕ್ಕಾಗಿ ೨೯ ಕಾನೂನುಗಳನ್ನು ರೂಪಿಸಲಾಗಿತ್ತು. ಈ ಎಲ್ಲಾ ಕಾನೂನಗಳಿಗೆ ತಿದ್ದಪಡಿ ಮಾಡಿ ೪ ಕೋಡಗಳನ್ನಾಗಿಸಿ ವಿರೂಪಗೊಳಿಸಲಾಗಿದೆ. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಡಿತ ಮಾಡಲಾಗಿದೆ. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿದೆ ಎಂದು ಕಿಡಿ ಕಾರಿದರು.

ಸಿಐಟಿಯು ತಾಲೂಕು ಮುಖಂಡ ಎಸ್.ಜಗನ್ನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಜ್ಯೋತೇಶ್ವರಿ, ಚರಂತೇಶ್, ಬಿ.ರಫೀ, ಅಶೋಕ್ ಹಾಗೂ ಶಿಶುನಾಳ ಷರೀಫ್ ವೇದಿಕೆಯ ಇರ್ಫಾನ್ ಮತ್ತಿತರರಿದ್ದರು.

ಬಿ.ಲಕ್ಷ್ಮಣ್ ಮತ್ತು ಸುರೇಶ್ ನಿರ್ವಹಿಸಿದರು. ನಾನಾ ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಮಿಕರು ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.