ಸಾರಾಂಶ
ಉಡುಪಿ ಜಿಲ್ಲೆಯ ಪತ್ತಿನ ಹಾಗೂ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗಾಗಿ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸಹಕಾರ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು ತಂದು, ಜನರ ವಿಶ್ವಾಸದ ಜೊತೆಗೆ ವ್ಯವಹಾರ ಹೆಚ್ಚಿಸಲು ಕೇಂದ್ರ ಸರ್ಕಾರ ಕಾನೂನು ತರಲು ಯೋಚಿಸಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದ್ದಾರೆ.ಅವರು ಉಡುಪಿ ಜಿಲ್ಲೆಯ ಪತ್ತಿನ ಹಾಗೂ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗಾಗಿ ನಡೆದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನರ ಮನೆ ಬಾಗಿಲಿಗೆ ಸಹಕಾರ ಸೇವೆಯನ್ನು ಕೊಂಡೊಯ್ಯಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಗುಜರಾತಿನ ತ್ರಿಭುವನ್ ಸಹಕಾರ ವಿವಿಯಲ್ಲಿ ಸಹಕಾರ, ಮಾರುಕಟ್ಟೆ ಬಗ್ಗೆ ಎಂಬಿಎ ಶಿಕ್ಷಣವನ್ನು ಆರಂಭಿಸಲಾಗಿದೆ. ಇದು ಸಹಕಾರ ಕ್ಷೇತ್ರದ ಮತ್ತಷ್ಟು ಪ್ರಗತಿಗೆ ಪೂರಕವಾಗಲಿದೆ ಎಂದರು.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ, ರಾಜ್ಯ ಸರ್ಕಾರದ ಉದ್ದೇಶಿತ ತಿದ್ದುಪಡಿ, ಠೇವಣಿ ವಿನಿಯೋಗ ಕುರಿತ ವಿಧೇಯಕ ಜಾರಿಗೆ ಬಂದರೆ ಸಹಕಾರ ಕ್ಷೇತ್ರದ ಮೇಲಾಗುವ ಪರಿಣಾಮಗಳ ಬಗ್ಗೆ ಚಿಂತನಮಂಥನವಾಗಬೇಕು ಎಂದು ಹೇಳಿದರು.ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜಯಪ್ರಕಾಶ್ ಕೆಡ್ಲಾಯ, ಲಿಕೋ ಬ್ಯಾಂಕ್ ಅಧ್ಯಕ್ಷ ಕೃಷ್ಣ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಎಚ್. ಗಂಗಾಧರ ಶೆಟ್ಟಿ, ಶ್ರೀಧರ ಪಿ.ಎಸ್., ಕೆ.ಸುರೇಶ್ ರಾವ್, ಶಿವಮೊಗ್ಗದ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ಉಪಸ್ಥಿತರಿದ್ದರು.ಸಹಕಾರಿ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಹಾಗೂ ಸಿದ್ಧನಗೌಡ ಪಾಟೀಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.