ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಚೇರಿಗಳಲ್ಲಿ ಸ್ಚಚ್ಛತೆ ಕಾಪಾಡಬೇಕು. ಸಂಜೆಯೊಳಗೆ ಕಚೇರಿಯ ಒಳಗೆ ಮತ್ತು ಹೊರಗಿನ ವಾತಾವರಣ ಸಂಪೂರ್ಣ ಬದಲಾಗಬೇಕು. ಸಾರ್ವಜನಿಕ ಕೆಲಸಗಳು ಯಾವುದೇ ತೊಂದರೆ ಇಲ್ಲದಂತೆ ಸುಲಲಿತವಾಗಿ ಆಗಬೇಕು. ಈ ಬಗ್ಗೆ ನೀವು ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದರು.
ಪಿಡಿಒಗಳಿಗೆ ನೋಟಿಸ್:ಸಕಾಲದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇ ಮಾಡದೇ ಬೇಜವಾಬ್ದಾರಿ ತೋರಿದ ಮೇಳಾಪುರ, ತಡಗವಾಡಿ, ಹುಲಿಕೆರೆ ಗ್ರಾಮ ಪಂಚಾಯತ್ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡುವಂತೆ ಇಒ ವೇಣು ಅವರಿಗೆ ಸೂಚನೆ ನೀಡಿದರು. ೪೫ ದಿನಗಳೊಳಗಾಗಿ ಅರ್ಜಿಗಳನ್ನು ವಿಲೇವಾರಿ ಮಾಡದಿರುವ ಪಿಡಿಒಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲು ಇಒಗಳಿಗೆ ಸೂಚನೆ ನೀಡಿದರು.
ಕೆ.ಶೆಟ್ಟಿಹಳ್ಳಿ ಗ್ರಾಪಂನಲ್ಲೂ ವಿವಿಧ ಯೋಜನೆಗಳಡಿ ನಿರೀಕ್ಷಿತ ಪ್ರಗತಿ ಆಗದಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಉತ್ತಮ ಪ್ರಗತಿ ಸಾಧಿಸುವಂತೆ ಸೂಚಿಸಿದರು.ಗ್ರಾಪಂಗಳಿಗೆ ಭೇಟಿ:
ಕೆ.ಶೆಟ್ಟಹಳ್ಳಿ, ಕಿರಂಗೂರು ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿದ ಸಿಇಒ ಅವರು, ಇ- ಸ್ವತ್ತು, ಸಕಾಲ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸಬೇಕು. ಅಲ್ಲದೆ, ಗ್ರಾಪಂನಲ್ಲಿರುವ ಪಿಡಿಒ ಸೇರಿದಂತೆ ಎಲ್ಲಾ ಸಿಬ್ಬಂದಿಯ ಮಾಹಿತಿ, ಕುಡಿಯುವ ನೀರಿನ ಸ್ಥಾವರ, ನಲ್ಲಿಗಳು, ಕಿರು ನೀರು ಸರಬರಾಜು ಘಟಕಗಳು, ಬೋರ್ವೆಲ್ ಸಂಖ್ಯೆಯನ್ನು ಗೋಡೆಯ ಮೇಲೆ ಬರೆಸಬೇಕು. ನೀರು, ನೈರ್ಮಲ್ಯ ಸೇರಿದಂತೆ ಇತರೆ ಯೋಜನೆಗಳ ಕುಂದುಕೊರತೆಗಳ ಕುರಿತು ದೂರು ಸಲ್ಲಿಸಲು ತೆರೆಯಲಾಗಿರುವ ಸಹಾಯವಾಣಿ ಸಂಖ್ಯೆ: ೮೨೭೭೫೦೬೦೦೦ ಯನ್ನು ಗ್ರಾಪಂನಲ್ಲಿ ಪ್ರದರ್ಶಿಸಬೇಕು. ಅಲ್ಲದೆ, ವಿವಿಧ ಯೋಜನೆಗಳ ಕಡತಗಳನ್ನು ಚೆಕ್ಲಿಸ್ಟ್ ಪ್ರಕಾರ ನಿರ್ವಹಿಸಬೇಕು ಎಂದರು.ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ:
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಸ್ವಚ್ಛ ವಾಹಿನಿಗಳು ಸುಸ್ಥಿತಿಯಲ್ಲಿರಬೇಕು, ಪ್ರತಿ ದಿನ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಎಸ್ಡಬ್ಲ್ಯೂಎಂ ಶೆಡ್ಗಳಲ್ಲಿ ಸಂಗ್ರಹಣೆ ಮಾಡಲು ಕ್ರಮವಹಿಸಬೇಕು, ಸಂಗ್ರವಾದ ತ್ಯಾಜ್ಯವನ್ನು ಜಿಪಿಎಲ್ಎಫ್ ಘಟಕಕ್ಕೆ ಸಾಗಣೆ ಮಾಡಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಎನ್ಆರ್ಎಲ್ಎಂ ಚಟುವಟಿಕೆಗಳಿಗೆ ಬಳಸಿಕೊಳ್ಳಿ:
ಎನ್ಆರ್ಎಲ್ಎಂ ಯೋಜನೆಯಡಿ ಜಿಪಿಎಲ್ಎಫ್ಗಳು ಅದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಕಚ್ಚಾ ವಸ್ತು ಖರೀದಿಸಲು, ಉತ್ಪನ್ನಗಳನ್ನು ಸಂಗ್ರಹ ಮಾಡಲು ಹಾಗೂ ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸಲು ಗ್ರಾಮ ಪಂಚಾಯತ್ ಗಳು ಅಗತ್ಯ ಕ್ರಮವಹಿಸಬೇಕು. ಹಳೆಯ ಶಾಲಾ ಕಟ್ಟಡಗಳಿದ್ದಲ್ಲಿ, ಅಂತಹ ಕಟ್ಟಡಗಳನ್ನು ತಾತ್ಕಾಲಿಕವಾಗಿ ಎನ್ಆರ್ಎಲ್ಎಂ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಿದರು.೧೫ನೇ ಹಣಕಾಸು ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಐಪಿಎಎಪಿ ತಂತ್ರಾಂಶದ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಯೋಜನೆಯಡಿ ಭರಿಸಲಾಗುವ ವೆಚ್ಚವನ್ನು ಮೇಲ್ವಿಚಾರಣೆ ಮಾಡಲಾಗುವುದು. ಆದ್ದರಿಂದ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳು ಕ್ರಿಯಾ ಯೋಜನೆಯನ್ನು ಇಂಡೀಕರಿಸುವಂತೆ ಸೂಚಿಸಿದರು.
ಜನರನ್ನು ಸತಾಯಿಸಬೇಡಿ, ಕೆಲಸ ಮಾಡಿಕೊಡಿ:ವಿವಿಧ ಕೆಲಸಗಳನ್ನು ಮಾಡಿಕೊಡುವಂತೆ ಕೋರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಸತಾಯಿಸದೇ, ಗೌರವಕೊಟ್ಟ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ಇ- ಸ್ವತ್ತು, ಸಕಾಲ ಸೇರಿದಂತೆ ವಿವಿಧ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇ ಮಾಡುತ್ತಿಲ್ಲ. ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎನ್ನುವ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕೃತವಾಗುತ್ತಿವೆ. ಇದು ತಪ್ಪಬೇಕು. ಇದನ್ನು ಸಹಿಸಲು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಸೂಕ್ತ ಹಿಂಬರಹವನ್ನು ನಿಗದಿತ ಅವಧಿಯೊಳಗೆ ನೀಡಬೇಕು ಎಂದು ಹೇಳಿದರು.ಗ್ರಾಪಂ ಮತ್ತು ತಾಪಂ ಮಟ್ಟದಲ್ಲೇ ಪರಿಹರಿಸಬಹುದಾದ ಬಹುತೇಕ ಸಮಸ್ಯೆಗಳ ಅರ್ಜಿ ಹಿಡಿದು ಸಾರ್ವಜನಿಕರು ಜಿಲ್ಲಾ ಮಟ್ಟದ ಕಚೇರಿವರೆಗೂ ಬರುತ್ತಿದ್ದಾರೆ. ಇದು ಮುಂದುವರಿದಲ್ಲಿ ಸಂಬಂಧಪಟ್ಟವರಿಂದ ವಿವರಣೆ ಕೇಳಿ ನಿರ್ಧಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.